ಬಂಟ್ವಾಳ, ತಾಲೂಕಿನ ಇಬ್ಬರು ಯುವಕರು ಆಟೋ ರಿಕ್ಷಾದಲ್ಲೇ 11 ದಿನಗಳ ಕಾಲ 4,200 ಕಿ.ಮೀ. ಕ್ರಮಿಸಿ ನಾಲ್ಕು ರಾಜ್ಯಗಳ ಐದು ಜ್ಯೋತಿರ್ಲಿಂಗಗಳ ದರ್ಶನ ಪಡೆದು ಮರಳಿದ್ದಾರೆ.

ಮೆಲ್ಕಾರಿನ ಕ್ಯಾಟರಿಂಗ್ ಉದ್ಯಮಿ ವಿಜೇತ್ ನಾಯಕ್ ಮತ್ತು ಕಲ್ಲಡ್ಕದ ಸಾಫ್ಟ್ವೇರ್ ಎಂಜಿನಿಯರ್ ವಿಶ್ವಾಸ್ ಪ್ರಭು ಅವರು ಜೂ. 29ರಂದು ಮುಂಜಾನೆ 4 ಗಂಟೆಗೆ ಪ್ರವಾಸ ಆರಂಭಿಸಿ ಜು. 9ರಂದು ಊರಿಗೆ ಬಂದಿದ್ದಾರೆ.
ವಿಜೇತ್ ಹಾಗೂ ವಿಶ್ವಾಸ್ ಬಾಲ್ಯ ಸ್ನೇಹಿತರಾಗಿದ್ದು, ಇವರಿಬ್ಬರಿಗೆ ಪ್ರವಾಸ, ಟ್ರಕ್ಕಿಂಗ್ ಗೆ ಹೋಗುವ ಹುಚ್ಚು ಬಾಲ್ಯದಿಂದಲೇ ಇತ್ತು. ಈ ಹಿಂದೆ ರೈಲಿನ ಮೂಲಕ ಉತ್ತರ ಭಾರತದ ತೀರ್ಥಕ್ಷೇತ್ರಗಳಿಗೆ ಭೇಟಿ ನೀಡಿದ್ದರು. ವಿಜೇತ್ ಅವರು ಕ್ಯಾಟರಿಂಗ್ ಉದ್ಯಮ ಮಾಡುತ್ತಿರುವುದರಿಂದ ತಮಗೆ ಅನುಕೂಲವಾಗುವ ದೃಷ್ಟಿಯಿಂದ ಒಂದೂವರೆ ವರ್ಷದ ಹಿಂದೆ ಖಾಸಗಿ ರಿಕ್ಷಾವೊಂದನ್ನು ಖರೀದಿ ಮಾಡಿದ್ದರು. ಬಿಳಿ ನಂಬರ್ ಪ್ಲೇಟ್ ಇರುವ ಈ ಆಟೋದಲ್ಲಿ ಯಾವುದೇ ರಾಜ್ಯಕ್ಕೆ ತೆರಳಲು ಟೂರಿಸ್ಟ್ ಪರವಾನಿಗೆ ಪಡೆಯಬೇಕಿಲ್ಲ.
ಇವರಿಬ್ಬರು ಈ ಹಿಂದೆಯೂ ಆಟೋ ರಿಕ್ಷಾದಲ್ಲಿ ಅನಂತಪುರ, ಚಾರ್ಮಾಡಿ ಮೊದಲಾದ ಭಾಗಗಳಿಗೆ ಸಾಕಷ್ಟು ಬಾರಿ ತೆರಳಿದ್ದರು. ಆದರೀಗ ಇದೇ ಮೊದಲ ಬಾರಿಗೆ ಇಷ್ಟು ದೂರದ ಪ್ರವಾಸವನ್ನು ಕೈಗೊಂಡಿದ್ದರು. ಬಂಟ್ವಾಳದಿಂದ ಹೊರಟ ಯುವಕರು ಕರ್ನಾಟಕ, ಗೋವಾವನ್ನು ದಾಟಿ ಮಹಾರಾಷ್ಟ್ರಕ್ಕೆ ತೆರಳಿ ಅಲ್ಲಿ ಗೃಷ್ಣೇಶ್ವರ, ಭೀಮಾಶಂಕರ, ತ್ರ್ಯಂಬಕೇಶ್ವರ ಜ್ಯೋತಿರ್ಲಿಂಗ ಕ್ಷೇತ್ರಗಳ ದರ್ಶನ ಮಾಡಿ ಮುಂದೆ ಗುಜರಾತ್ನ ನಾಗೇಶ್ವರ, ಸೋಮನಾಥ ಕ್ಷೇತ್ರದ ಜ್ಯೋತಿರ್ಲಿಂಗದ ದರ್ಶನ ಪಡೆದಿದ್ದಾರೆ. ಇದರೊಂದಿಗೆ ಎಲ್ಲೋರ, ದ್ವಾರಕಾ, ಏಕತಾ ವಿಗ್ರಹ ಮುಂತಾದ ಸ್ಥಳಗಳಿಗೆ ಭೇಟಿ ನೀಡಿದ್ದಾರೆ.
ಇನ್ನು ಕೇವಲ 11 ದಿನಗಳಲ್ಲಿ 4 ರಾಜ್ಯಗಳನ್ನು ಸುತ್ತಾಡಲು ತಲಾ ಒಬ್ಬೊಬ್ಬರಿಗೆ 14 ಸಾವಿರ ರೂ.ಗಳಷ್ಟು ಖರ್ಚಾಗಿದೆ. ದಿನಸಿ ಸಾಮಾಗ್ರಿಗಳು, ಗ್ಯಾಸ್ ಸ್ಟೌ, ಪಾತ್ರೆಗಳನ್ನು ಜೊತೆಯಲ್ಲಿ ತೆಗೆದುಕೊಂಡು ಹೋಗಿದ್ದ ಯುವಕರು ತಮ್ಮ ಪ್ರವಾಸದಲ್ಲಿ ಊಟ-ಉಪಾಹಾರವನ್ನೂ ಅವರೇ ತಯಾರಿಸಿದ್ದಾರೆ. ಪ್ರತಿ ಮೂರು ಗಂಟೆಗಳಿಗೊಮ್ಮೆ ಒಬ್ಬೊಬ್ಬರು ಆಟೋ ಚಲಾಯಿಸಿ 5 ಜ್ಯೋತಿರ್ಲಿಂಗಳ ದರ್ಶನ ಪಡೆದು ಮರಳಿದ್ದಾರೆ.
ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿದ ವಿಜೇತ್ ನಾಯಕ್ ಇದೇ ಮೊದಲ ಬಾರಿಗೆ ಲಾಂಗ್ ಜರ್ನಿ ಕೈಗೊಂಡಿದ್ದು, ರೂಟ್, ಕಿ.ಮೀ. ಸಹಿತ ಎಲ್ಲ ಯೋಜನೆಗಳನ್ನು ಮೊದಲೇ ಹಾಕಿಕೊಂಡ ಪರಿಣಾಮ ನಿರೀಕ್ಷೆಯಂತೆಯೇ ಪ್ರವಾಸವನ್ನು ಪೂರ್ಣಗೊಳಿಸಿದ್ದೇವೆ. ಹೊಸ ರಿಕ್ಷಾ ಆದುದರಿಂದ ಕಂಡೀಶನ್ ಉತ್ತಮವಾಗಿದ್ದು, ಎಲ್ಲೂ ಸಮಸ್ಯೆ ಆಗಿಲ್ಲ ಎಂದು ತಿಳಿಸಿದ್ದಾರೆ.