ಬೆಂಗಳೂರು,ನ.26(DaijiworldNews/AK): ಭಾರತವು ಯಶಸ್ವಿ ದೇಶವಾಗಲು ಸಂವಿಧಾನವು ಯಶಸ್ವಿಯಾಗಬೇಕು ಮತ್ತು ಸಂವಿಧಾನದ ಆಶಯಗಳು ಈಡೇರಬೇಕು ಎಂದು ಮಾಜಿ ಮುಖ್ಯಮಂತ್ರಿ ಮತ್ತು ಸಂಸದ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.

ಸಂವಿಧಾನ ದಿನಾಚರಣೆಯ ಪ್ರಯುಕ್ತ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ‘ಸಂವಿಧಾನ ಸನ್ಮಾನ ಅಭಿಯಾನ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸ್ವಾತಂತ್ರ್ಯಾನಂತರದಲ್ಲಿ ಸಂವಿಧಾನ ರಚನೆ ಬಹು ದೊಡ್ಡ ಸವಾಲಾಗಿತ್ತು. ಆಗ ಸಂವಿಧಾನ ಸಮಿತಿಯು ಸುದೀರ್ಘ- ಎಲ್ಲ ಆಯಾಮಗಳಲ್ಲಿ ಚರ್ಚೆ ಮಾಡಿ, ಬಾಬಾಸಾಹೇಬ ಅಂಬೇಡ್ಕರರ ಮಾನವೀಯ ತತ್ವಗಳನ್ನು ಸೇರಿಸಿದ್ದರಿಂದ ನಮ್ಮ ಸಂವಿಧಾನವು ವಿಶ್ವದಲ್ಲೇ ಅತ್ಯಂತ ಶ್ರೇಷ್ಠ ಸಂವಿಧಾನ ಎನಿಸಿದೆ ಎಂದು ಅವರು ವಿಶ್ಲೇಷಣೆ ಮಾಡಿದರು.
ಹಲವಾರು ದೇಶಗಳ ಸಂವಿಧಾನಗಳನ್ನು ಅಧ್ಯಯನ ಮಾಡಿ, ಸಾರ್ವಕಾಲಿಕವಾಗಿರುವ ಸಂವಿಧಾನ ರಚಿಸಲಾಗಿದೆ. ಇದು ಬಾಬಾಸಾಹೇಬ ಡಾ. ಅಂಬೇಡ್ಕರ್ ಅವರ ದೂರದೃಷ್ಟಿಯ ಫಲ ಎಂದು ಅವರು ತಿಳಿಸಿದರು.ಬಾಬಾ ಸಾಹೇಬರ ಆಶಯದಂತೆ ನಾವಿಂದು ಭಾರತದಲ್ಲಿ ಸರ್ವ ಸ್ವತಂತ್ರ, ವ್ಯಕ್ತಿಯ ಸ್ವಾತಂತ್ರ್ಯ ಮತ್ತು ಸಮಾನತೆಯ ಬದುಕನ್ನು ಕಾಣುವಂತಾಗಿದೆ ಎಂದು ತಿಳಿಸಿದರು.
ಸಂವಿಧಾನದಲ್ಲಿ ಸಂಪೂರ್ಣ ನಂಬಿಕೆಯಿಟ್ಟು ಕೆಲಸ ಕಾರ್ಯ ಮಾಡಿದ ಬಿಜೆಪಿ
ಬಿಜೆಪಿ ಸಂವಿಧಾನದಲ್ಲಿ ಸಂಪೂರ್ಣ ನಂಬಿಕೆಯಿಟ್ಟು ಕೆಲಸ ಕಾರ್ಯಗಳನ್ನು ಮಾಡಿದೆ. ಡಾ. ಅಂಬೇಡ್ಕರ್ ಅವರು 370ನೇ ವಿಧಿ ತಾತ್ಕಾಲಿಕವಾಗಿ ಇರಬೇಕು ಎಂದಿದ್ದರು. 370ನೇ ವಿಧಿ ರದ್ದು ಮಾಡಿ ಆ ಕೆಲಸವನ್ನು ಬಿಜೆಪಿ ಮಾಡಿದೆ. ಹಿಂದುಳಿದ ಆಯೋಗಕ್ಕೆ ಸಾಂವಿಧಾನಿಕ ಸ್ಥಾನಮಾನದ ಆಶಯ ಈಡೇರಿಸಿದ್ದಾರೆ ಎಂದು ವಿವರ ನೀಡಿದರು.