ಚಾಮರಾಜನಗರ,ನ.27(DaijiworldNews/TA): ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಕಾಡಂಚಿನ ಜಕ್ಕಳ್ಳಿ ಗ್ರಾಮದ ಜಮೀನೊಂದರಲ್ಲಿ ತಂತಿ ಬೇಲಿಗೆ ಹರಿಸಲಾಗಿದ್ದ ವಿದ್ಯುತ್ ಸ್ಪರ್ಶಿಸಿ ಮೂರು ವರ್ಷದ ಗಂಡಾನೆ ಮರಿ ಸಾವನ್ನಪ್ಪಿದ ಘಟನೆ ನಡೆದಿದೆ.

ಕಾಡಿನಿಂದ ಮೇವು ಅರಸಿ ಬಂದ ಆನೆ ಮರಿಗೆ ವಿದ್ಯುತ್ ಸ್ಪರ್ಶಿಸಿ ಸ್ಥಳದಲ್ಲೇ ಮೃತಪಟ್ಟಿದೆ ಎನ್ನಲಾಗಿದೆ. ಶರಿಯರ್ ಖಾನ್ ಎಂಬುವವರಿಗೆ ಸೇರಿದ ಜಮೀನು ಇದಾಗಿದ್ದು ತಂತಿ ಬೇಲಿಗೆ ಅಕ್ರಮವಾಗಿ ವಿದ್ಯುತ್ ಸಂಪರ್ಕ ನೀಡಲಾಗಿತ್ತು ಎಂದು ಹೇಳಲಾಗಿದೆ.
ಜಮೀನು ಮಾಲೀಕರು ಮತ್ತು ಜಮೀನು ಗುತ್ತಿಗೆ ಪಡೆದವರ ವಿರುದ್ಧ ಅರಣ್ಯ ಇಲಾಖೆ ಅಧಿಕಾರಿಗಳು ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ಧಾರೆ.