ಬೆಂಗಳೂರು,ನ.27(DaijiworldNews/TA):ಈಗಾಗಲೇ ದೆಹಲಿಯಲ್ಲಿ ಬೀಡುಬಿಟ್ಟಿರುವ ಡಿಸಿಎಂ ಡಿಕೆ ಶಿವಕುಮಾರ್ ಹೈಕಮಾಂಡ್ ನಾಯಕರ ಜೊತೆ ಚರ್ಚೆ ನಡೆಸಿದ್ದಾರೆ. ಈ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಗುರುವಾರ ದೆಹಲಿಗೆ ದಿಢೀರ್ ಭೇಟಿ ನೀಡಲಿದ್ದಾರೆ ಎಂದು ಹೇಳಲಾಗಿದೆ.

ಸಂಪುಟ ಪುನಾರಚನೆ ಜೊತೆಗೆ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರವಾಗಿಯೂ ಹೈಕಮಾಂಡ್ ಜೊತೆ ಸಿಎಂ ಚರ್ಚೆ ನಡೆಸುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ. ಜನವರಿಯಲ್ಲಿ ಸಂಪುಟ ಸರ್ಜರಿ ಜೊತೆಗೆ ಕೆಪಿಸಿಸಿಗೆ ಹೊಸ ಅಧ್ಯಕ್ಷ ಬರುವ ನಿರೀಕ್ಷೆ ಇದೆ.
ಸಂಪುಟ ಸರ್ಜರಿ ಕುರಿತಾಗಿ ಕಾಂಗ್ರೆಸ್ ನಾಯಕರು ಭಿನ್ನ ಹೇಳಿಕೆಗಳನ್ನು ನೀಡಿದ್ದಾರೆ. ಯಾರೂ ಈ ಬಗ್ಗೆ ಸ್ಪಷ್ಟವಾದ ಹೇಳಿಕೆ ನೀಡಿಲ್ಲ. ಶಿವಮೊಗ್ಗದಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಪ್ರತಿಕ್ರಿಯಿಸಿ, ಸಚಿವ ಸಂಪುಟದ ಬಗ್ಗೆ ಯಾವುದೇ ಬೆಳವಣಿಗೆ ಇಲ್ಲ. ಎರಡು ವರ್ಷದ ಅವಧಿ ನಂತರ ಸಂಪುಟ ಪುನರ್ ರಚನೆ ಆದರೆ ಒಳ್ಳೆಯದೇ, ಬೇರೆಯವರಿಗೂ ಅವಕಾಶ ಸಿಗಲಿದೆ. ನಾವೇ ಇರಬೇಕು, ಇನ್ನೊಬ್ಬರು ಬರಬಾರದು ಎಂಬುವುದೇನಿಲ್ಲ. ಎಲ್ಲರೂ ತಯಾರಾಗಿರಬೇಕು ಎಂಬುವುದಾಗಿ ಹೇಳಿದ್ದಾರೆ.