ಬೆಂಗಳೂರು, ನ.30(DaijiworldNews/AK): ಕರ್ನಾಟಕದಲ್ಲಿ ಆರೋಗ್ಯ ಇಲಾಖೆಗೆ ಅನಾರೋಗ್ಯ ಬಡಿದಿದೆ ಎಂದು ಕೇಂದ್ರ ಸಚಿವೆ ಕು.ಶೋಭಾ ಕರಂದ್ಲಾಜೆ ಅವರು ಆಕ್ಷೇಪಿಸಿದರು.

ದೆಹಲಿಯಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಆರೋಗ್ಯ ಇಲಾಖೆಯು ಭ್ರಷ್ಟಾಚಾರ, ಸ್ವಜನಪಕ್ಷಪಾತ, ನಿರ್ಲಕ್ಷ್ಯ, ದುರಹಂಕಾರದಿಂದ ತುಂಬಿತುಳುಕಿ ಇವತ್ತು ನಮ್ಮ ರಾಜ್ಯದ ಮಹಿಳೆಯರ ಮತ್ತು ಮಕ್ಕಳ ಸಾವಿಗೆ ಕಾರಣವಾಗುತ್ತಿದೆ ಎಂದು ಅವರು ಟೀಕಿಸಿದರು.
ಲೋಕಾಯುಕ್ತದವರು ಆಸ್ಪತ್ರೆಗಳಿಗೆ ಭೇಟಿ ನೀಡಿ ಛೀಮಾರಿ ಹಾಕಿದ್ದಾರೆ. ಹಲವಾರು ತಜ್ಞರ ತಂಡಗಳು ಆಸ್ಪತ್ರೆಗಳು ಸರಿಯಾಗಿ ನಡೆಯುತ್ತಿಲ್ಲ ಎಂದು ವರದಿ ಕೊಟ್ಟಿವೆ. ಆಸ್ಪತ್ರೆಗೆ ಹೋಗುವ ಸಾರ್ವಜನಿಕರು ಬದುಕಿ ವಾಪಸ್ ಬರುವುದಿಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಆಸ್ಪತ್ರೆಗಳಲ್ಲಿ ಆಗುವ ಸಾವು ಕರ್ನಾಟಕವನ್ನು ಆತಂಕಕ್ಕೆ ಈಡು ಮಾಡಿದೆ. ಕರ್ನಾಟಕದಲ್ಲಿ ಹೆರಿಗೆ ಆಸ್ಪತ್ರೆಗಳಲ್ಲಿ ಆಗುವ ಸಾವನ್ನು ಸರಕಾರ ಮುಚ್ಚಿಡುತ್ತಿದೆ. ಒಂದೆಡೆ ಬಾಣಂತಿಯರ ಸಾವು, ಮತ್ತೊಂದೆಡೆ ಮಕ್ಕಳ ಸಾವು ಸಂಭವಿಸುತ್ತಿದೆ ಎಂದು ವಿವರಿಸಿದರು.
ಬಳ್ಳಾರಿ ನಮ್ಮ ಕಣ್ಣಿಗೆ ಕಾಣುವ ಉದಾಹರಣೆಯಷ್ಟೇ. ಬಳ್ಳಾರಿಯಲ್ಲಿ ಒಟ್ಟು 5 ಸಾವಾಗಿದೆ. ಸಿಸೇರಿಯನ್ ಆದಂಥ ಹೆಣ್ಮಕ್ಕಳು ಅವರಿಗೆ ಕೊಟ್ಟ ಗ್ಲುಕೋಸ್ ಕಾರಣಕ್ಕಾಗಿ ಮೃತಪಟ್ಟಿದ್ದಾರೆ. ರಾಜೀವ್ ಗಾಂಧಿ ವಿವಿ ಮತ್ತು ಇತರ ವೈದ್ಯರ ತಂಡಗಳು ಇದೇ ಕಾರಣಕ್ಕಾಗಿ ಸಾವು ಸಂಭವಿಸಿದೆ ಎಂದು ವರದಿ ನೀಡಿವೆ ಎಂದು ತಿಳಿಸಿದರು.
ಮುಖ್ಯಮಂತ್ರಿ, ಸಚಿವರ ದುಡ್ಡಿನ ಆಸೆಗೆ ಬಡವರು ಬಲಿ
ಈ ಗ್ಲುಕೋಸ್ ಸರಬರಾಜು ಬೇಡ ಎಂದರೂ ಅದನ್ನೇ ಪೂರೈಸಲಾಗುತ್ತಿದೆ. ಒಂದೆಡೆ ಶರಣಪ್ರಕಾಶ್ ಪಾಟೀಲ್ ಅವರು ನಮ್ಮ ಆಸ್ಪತ್ರೆ ಮುಂದೆ ಇರುವ ಕೇಂದ್ರ ಸರಕಾರದ ಜನೌಷಧಿ ಕೇಂದ್ರವನ್ನೂ ಮುಚ್ಚುತ್ತೇನೆ ಎನ್ನುತ್ತಾರೆ. ಅಂದರೆ ಇವರೇನು ಮಾಡಲು ಹೊರಟಿದ್ದಾರೆ? ಮತ್ಯಾವುದೋ ದಂಧೆ ಮಾಡಲು ಹೊರಟಿದ್ದೀರಿ. ಇನ್ಯಾವುದೋ ಶೆಲ್ ಕಂಪೆನಿಗೆ ಟೆಂಡರ್ ಕೊಡಲು ಹೊರಟಿದ್ದೀರಿ ಎಂದು ಕು.ಶೋಭಾ ಕರಂದ್ಲಾಜೆ ಅವರು ಆಕ್ಷೇಪ ವ್ಯಕ್ತಪಡಿಸಿದರು.
ಕೇಂದ್ರ ಸರಕಾರದ ಜನೌಷಧಿ, ಸೌಲಭ್ಯಗಳನ್ನು ತೆಗೆದುಕೊಳ್ಳಲು ನೀವು ಸಿದ್ಧರಿಲ್ಲ; ನೀವೇ ಸ್ವಂತ ಟೆಂಡರ್ ಕರೆದು, ಭ್ರಷ್ಟಾಚಾರ ಮಾಡಿ ಪರ್ಸೆಂಟೇಜ್ ಹೊಡೆಯಲು ಮುಂದಾಗಿದ್ದೀರಿ. ಕಾಂಗ್ರೆಸ್ ಸರಕಾರದ ಮುಖ್ಯಮಂತ್ರಿಗಳ, ಮಂತ್ರಿಗಳ ದುಡ್ಡಿನ ಆಸೆಗೆ ನಮ್ಮ ಬಡವರು ಇವತ್ತು ಬಲಿಯಾಗುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಸಚಿವ ದಿನೇಶ್ ಗುಂಡೂರಾವ್ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಅವರು ಸಿದ್ದರಾಮಯ್ಯರನ್ನು ಆಗ್ರಹಿಸಿದರು.