ನವದೆಹಲಿ, ಡಿ.09(DaijiworldNews/AK): ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ರೈತರಿಗೆ ಮತ್ತೆ ಮತ್ತೆ ದ್ರೋಹ ಬಗೆದಿದ್ದು, ರೈತರು ನ್ಯಾಯ ಕೇಳುತ್ತಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ರೈತರು ನ್ಯಾಯಕ್ಕಾಗಿ ಪದೇ ಪದೇ ದೆಹಲಿಯ ಬಾಗಿಲಿಗೆ ಏಕೆ ಬರಬೇಕು ಎಂದು ಪ್ರಧಾನಿ ಮೋದಿ ಅವರನ್ನು ಖರ್ಗೆ ಪ್ರಶ್ನಿಸಿದ್ದಾರೆ.ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಖರ್ಗೆ , ಹರಿಯಾಣ ಮತ್ತು ರಾಜಸ್ಥಾನ ಪ್ರವಾಸದಲ್ಲಿರುವ ನೀವು, ದೇಶಕ್ಕೆ ಅನ್ನ ನೀಡುವ ರೈತರ ಹೋರಾಟವನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುತ್ತೀರಿ ಎಂದು ನಾನು ಭಾವಿಸುತ್ತೇನೆ. ನಿಮ್ಮ ಸರ್ಕಾರ ಪದೇ ಪದೇ ದ್ರೋಹ ಮಾಡಿರುವುದರಿಂದ ರೈತರು ನ್ಯಾಯ ಕೇಳುತ್ತಿದ್ದಾರೆ ಎಂದು ಹೇಳಿದ್ದಾರೆ.
2022ರ ವೇಳೆಗೆ ದೇಶದ ರೈತರ ಆದಾಯವನ್ನು ದ್ವಿಗುಣಗೊಳಿಸುವ ಭರವಸೆಯನ್ನು ಈಡೇರಿಸದಿರುವುದು. ಕನಿಷ್ಠ ಬೆಂಬಲ ಬೆಲೆಗೆ (ಎಂ ಎಸ್ಪಿ) ಕಾನೂನು ಖಾತರಿ ನೀಡಲು ಸಮಿತಿ ರಚಿಸಿದರೂ ಅದರಂತೆ ಕಾರ್ಯ ನಿರ್ವ ಹಿಸದೆ ಇರುವುದು. ರೈತರು ಬೆಳೆದ ಬೆಳೆಗಳ ಸಮರ್ಪಕ ಖರೀದಿಯಾಗಲಿ ಮತ್ತು ಬೆಳೆಗಳಿಗೆ ನ್ಯಾಯಯುತ ಬೆಲೆ ಆಗಲಿ ಸಿಗುತ್ತಿಲ್ಲ. ಹೀಗೆ ನಿಮ್ಮ ಸರ್ಕಾರ ರೈತರಿಗೆ ಮತ್ತೆ ಮತ್ತೆ ದ್ರೋಹ ಮಾಡಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.