ಚಿಕ್ಕಮಗಳೂರು, ಡಿ.12(DaijiworldNews/AA): ಕೇರಳದ ವಯನಾಡಿಗೆ 100 ಮನೆಗಳನ್ನು ನೀಡಲು ಮುಂದಾಗಿರುವ ಸಿಎಂ ಸಿದ್ದರಾಮಯ್ಯನವರ ನಡೆ, ರಾಜಕೀಯ ಗುಲಾಮಗಿರಿಯ ಸಂಕೇತ ಎಂದು ಮಾಜಿ ಸಚಿವ ಸಿ.ಟಿ. ರವಿ ಕಿಡಿ ಕಾರಿದ್ದಾರೆ.

ನಗರದಲ್ಲಿ ಸಿದ್ದರಾಮಯ್ಯನವರು ಕೇರಳದ ವಯನಾಡಿನಲ್ಲಿ 100 ಮನೆ ಕಟ್ಟಿಸಿ ಕೊಡುತ್ತೇವೆ ಎಂದು ಪತ್ರ ಬರೆದಿರುವ ವಿಚಾರವಾಗಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಸಿಎಂ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇಡೀ ಅಖಂಡ ಭಾರತ ಒಂದು. ಇಡೀ ವಿಶ್ವವೇ ಒಂದು ಮನೆ ಎಂಬ ಉದಾತ್ತ ಮನೋಭಾವನೆ ಹೊಂದಿರುವವರು ನಾವು. ಅಕ್ಕಪಕ್ಕದವರಿಗೆ ಸಹಾಯ ಮಾಡುವುದು ತಪ್ಪಲ್ಲ. ಆದರೆ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕ ಗಾಂಧಿ ಪ್ರತಿನಿಧಿಸುವ ಕ್ಷೇತ್ರ ಎಂದು ಜಿಲ್ಲೆಗೆ ಮಾತ್ರ ಈ ರೀತಿ ಮನೆ ನೀಡಲು ಮುಂದಾಗಿರುವುದು ರಾಜಕೀಯ ಗುಲಾಮಗಿರಿಯ ಸಂಕೇತವಾಗಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ರಾಜ್ಯದ ರೈತರಿಗೆ ಸೂಕ್ತ ಪರಿಹಾರ ನೀಡಿಲ್ಲ. ಇಲ್ಲಿಯ ಸಂತ್ರಸ್ತರು ಬೀದಿಯಲ್ಲಿದ್ದಾರೆ. ಇಲ್ಲಿಯವರನ್ನು ಬಿಟ್ಟು ಅಲ್ಲಿಯವರಿಗೆ ಸಹಾಯ ಮಾಡುವುದು ರಾಜಕೀಯದ ಗುಲಾಮಗಿರಿ. ಕನ್ನಡಿಗರ ಕಷ್ಟಕ್ಕೆ ಸ್ಪಂದಿಸದೆ, ಕನ್ನಡಿಗರ ತೆರಿಗೆ ಹಣವನ್ನು ಅಲ್ಲಿ ವಿನಿಯೋಗಿಸುವುದು ಎಷ್ಟು ಸರಿ? ರಾಜ್ಯದ ಜನರ ಸಂಕಷ್ಟಗಳನ್ನ ಕಡೆಗಣಿಸಿ ಖರ್ಚು ಮಾಡುವುದು ಸೂಕ್ತವಾದ ನಡವಳಿಕೆ ಅಲ್ಲ ಎಂದು ಗುಡುಗಿದ್ದಾರೆ.