ಬೆಳಗಾವಿ,ಡಿ.16(DaijiworldNews/AK): ಇಲ್ಲಿನದು ವಿಧಾನಸಭೆ, ವಿಧಾನಪರಿಷತ್ತಿನ ಅಧಿವೇಶನದಂತಿಲ್ಲ; ಇದು ಪಿಕ್ನಿಕ್ನಂತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ಆಕ್ಷೇಪಿಸಿದರು.

ಬಾಣಂತಿಯರ ಸರಣಿ ಸಾವು, ಕಾಂಗ್ರೆಸ್ ಸರಕಾರದ ದಿವ್ಯ ನಿರ್ಲಕ್ಷ್ಯವನ್ನು ಖಂಡಿಸಿ ಬಿಜೆಪಿ ಮಹಿಳಾ ಮೋರ್ಚಾದ ವತಿಯಿಂದ ಇಂದು ಬೆಳಗಾವಿಯ ಮಾಲಿನಿ ಸಿಟಿ, ಯಡಿಯೂರಪ್ಪ ರಸ್ತೆಯಲ್ಲಿ ನಡೆದ ಬೃಹತ್ ಪ್ರತಿಭಟನೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.ಬಾಣಂತಿಯರ ಸಾವು ನಿರಂತರವಾಗಿದೆ. ಹಸುಗೂಸುಗಳೂ ಸಾವನ್ನಪ್ಪುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.
ಧ್ವನಿ ಇಲ್ಲದ ಬಾಣಂತಿಯರ ಕುಟುಂಬದ ಪರವಾಗಿ ಧ್ವನಿ ಎತ್ತುವ ಕೆಲಸವನ್ನು ನಾವೆಲ್ಲರೂ ಮಾಡಬೇಕಿದೆ. ಆ ಕೆಲಸವನ್ನು ಮಾಡಿದ ಬಿಜೆಪಿ ಮಹಿಳಾ ಮೋರ್ಚಾಕ್ಕೆ ಅಭಿನಂದನೆಗಳು ಎಂದು ತಿಳಿಸಿದರು.
ರೈತ ನಾಯಕ, ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಇಲ್ಲಿ ಸುವರ್ಣಸೌಧ ನಿರ್ಮಿಸಿ ಉತ್ತರ ಕರ್ನಾಟಕದ ವಿಚಾರದ ಸಮಗ್ರ ಚರ್ಚೆ ಆಗಬೇಕೆಂದು ಆಶಿಸಿದ್ದರು. ಈ ಭಾಗದ ಜ್ವಲಂತ ಸಮಸ್ಯೆಗಳ ಚರ್ಚೆ ಆಗಲೆಂದು ಬಯಸಿದ್ದರು. ಸದನದಲ್ಲಿ ಇವ್ಯಾವ ವಿಚಾರಗಳ ಚರ್ಚೆ ನಡೆಯುತ್ತಿಲ್ಲ. ಶಿಶುಗಳ ಮರಣ ಆಗುತ್ತಿದೆ; ಬಾಣಂತಿಯರು ಸಾವನ್ನಪ್ಪುತ್ತಿದ್ದಾರೆ; ಇವುಗಳ ಜೊತೆಗೆ ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿಯ ಚರ್ಚೆ ನಡೆಯುತ್ತಿಲ್ಲ ಎಂದು ಆಕ್ಷೇಪಿಸಿದರು.
ಯಡಿಯೂರಪ್ಪ ಅವರ ಭಾಗ್ಯಲಕ್ಷ್ಮಿ ಯೋಜನೆಯನ್ನು ಸಿದ್ದರಾಮಯ್ಯನವರ ಸರಕಾರ ನಿಲ್ಲಿಸಿದೆ ಎಂದು ಟೀಕಿಸಿದರು. ಇಂಥ ದರಿದ್ರ ಸರಕಾರ ರಾಜ್ಯದಲ್ಲಿದೆ ಎಂದು ತಿಳಿಸಿದರು. ರಾಜ್ಯದಲ್ಲಿ ಕಾಂಗ್ರೆಸ್ ಸರಕಾರವು ತಾಯಂದಿರಿಗೆ ಅವಮಾನ ಮಾಡುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರಕಾರವು ನಮ್ಮ ತಾಯಂದಿರ ರಕ್ಷಣೆಗೆ ಬರದೆ ಇರುವ ಸಂದರ್ಭವಿದು. ಒಂದೆಡೆ ಬಾಣಂತಿಯರ ಸಾವಾಗಿದೆ. ಆ ಮಗುವನ್ನು ಯಾರು ನೋಡಿಕೊಳ್ಳಬೇಕು ಎಂದು ಪ್ರಶ್ನಿಸಿದರು.ಇದರ ಬಗ್ಗೆಯೂ ಸಿಎಂ, ಕಾಂಗ್ರೆಸ್ ಸರಕಾರಕ್ಕೆ ಕಿಂಚಿತ್ತೂ ಕಾಳಜಿ ಇಲ್ಲ ಎಂದು ದೂರಿದರು.