ಬೆಂಗಳೂರು,ಜ.14 (DaijiworldNews/AK): ಕರ್ನಾಟಕ ಪತ್ರಕರ್ತರ ಸಹಕಾರ ಸಂಘದ ವಿಶಿಷ್ಟವಾಗಿ ಹೊರತಂದಿರುವ 2025ರ ಕ್ಯಾಲೆಂಡರ್ ನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂಕ್ರಾಂತಿ ಹಬ್ಬದ ದಿನದಂದು ಬೆಂಗಳೂರಿನಲ್ಲಿ ಬಿಡುಗಡೆ ಮಾಡಿದರು.
![](https://daijiworld.ap-south-1.linodeobjects.com/Linode/img_tv247/14-1-2025AKCM.jpg)
ಮುಖ್ಯಮಂತ್ರಿ ಗೃಹ ಕಚೇರಿ ಕಾವೇರಿಯಲ್ಲಿ ಕ್ಯಾಲೆಂಡರ್ ಬಿಡುಗಡೆ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಂಘಕ್ಕೆ 75 ವರ್ಷ ಪೂರೈಸಿದ್ದೀರಿ ಎಂಬುದೇ ಹೆಗ್ಗಳಿಕೆ. ಪತ್ರಕರ್ತರ ಸಹಕಾರ ಸಂಘಕ್ಕೆ ಒಳ್ಳೆಯದಾಗಲಿ, ಎಲ್ಲ ನಿರ್ದೇಶಕರಿಗೆ ಸಕ್ರಾಂತಿ ಶುಭಾಶಯಗಳು ಎಂದು ಹಾರೈಸಿದರು.
ಕರ್ನಾಟಕ ಪತ್ರಕರ್ತರ ಸಹಕಾರ ಸಂಘದ 75ನೇ ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ ನಾನು ತುಂಬಾ ಸಂತೋಷದಿಂದ ಬರುತ್ತೇನೆ. ಆದರೆ ನನಗೆ ತುಸು ಸಮಯ ಕೊಡಿ ಎಂದು ಹೇಳಿದರು. ಬಜೆಟ್ ಹಿನ್ನಲೆಯಲ್ಲಿ ಸ್ವಲ್ಪ ಬ್ಯೂಸಿಯಾಗಿದ್ದೇನೆ ಎಂದರು.
ಇದೇ ವೇಳೆ ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್, ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ಬೃಹತ್ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್, ಶಾಸಕ ರಘುಮೂರ್ತಿ ಅವರೂ ಪತ್ರಕರ್ತರ ಸಹಕಾರ ಸಂಘಕ್ಕೆ ಶುಭ ಹಾರೈಸಿದರು.
ಪತ್ರಕರ್ತರ ಸಹಕಾರ ಸಂಘದ ಅಧ್ಯಕ್ಷ ಎಂ.ರಮೇಶ್ ಪಾಳ್ಯ, ಉಪಾಧ್ಯಕ್ಷ ದೊಡ್ಡ ಬೊಮ್ಮಯ್ಯ, ಖಜಾಂಚಿ ಬಿ.ಮೋಹನ್ ಕುಮಾರ್, ವಿನೋದ್ ಕುಮಾರ್ ಬಿ. ನಾಯ್ಕ್, ರಮೇಶ್ ಹಿರೇಜಂಬೂರು, ಕೆ.ಪರಮೇಶ್ವರ್, ಆನಂದ್ ಬೈದನಮನೆ, ಪಿ.ಎಸ್.ಕೃಷ್ಣಕುಮಾರ್, ನಯನಾ ಸೇರಿದಂತೆ ಸಂಘದ ಎಲ್ಲ ನಿರ್ದೇಶಕರು, ಕಾರ್ಯದರ್ಶಿ ಕೆಂಪರಾಜು ಉಪಸ್ಥಿತರಿದ್ದರು.