ಬೆಂಗಳೂರು, ಫೆ.23 (DaijiworldNews/AA): ಖರ್ಗೆ ಅವರು ಬಾಯಿ ಮುಚ್ಚಿಕೊಂಡು ಇರಿ ಎಂದಿದ್ದಾರೆ. ಅವರೇ ಹೈಕಮಾಂಡ್ ಆಗಿರೋದ್ರಿಂದ ಅವರ ಸಂದೇಶ ಅರ್ಥ ಮಾಡಿಕೊಳ್ಳಬೇಕು. ಬಾಯಿ ಮುಚ್ಚಿಕೊಂಡು ಇರಿ ಅಂದರೆ ಸುಮ್ಮನಿರಬೇಕು ಎಂದು ಅರ್ಥ. ಅವರ ಈ ಹೇಳಿಕೆಯು ಎಲ್ಲದಕ್ಕೂ ತೆರೆ ಎಳೆದಿದೆ ಎಂದು ಶಾಸಕ ಟಿ.ಬಿ.ಜಯಚಂದ್ರ ತಿಳಿಸಿದ್ದಾರೆ.

ಪಕ್ಷದ ನಾಯಕರು ದೆಹಲಿಗೆ ಹೋಗ್ತಿರೋ ವಿಚಾರ ಮತ್ತು ಸಿಎಂ ಹಾಗೂ ಕೆಪಿಸಿಸಿ ಬದಲಾವಣೆ ವಿಚಾರವಾಗಿ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ ಅವರು, ಖರ್ಗೆ ಅವರು ಕರ್ನಾಟಕದ ಬಗ್ಗೆ ಅಧ್ಯಕ್ಷರ ಬದಲಾವಣೆ ಕುರಿತು ಹೇಳಿಲ್ಲ. ಕೆ.ಎನ್.ರಾಜಣ್ಣ ಪದೇ ಪದೇ ಹೇಳಿಕೆಯ ವಿಚಾರದಲ್ಲಿ ಯಾರು ಏನು ಹೇಳ್ತಾರೆ ಅನ್ನೋದಕ್ಕೆ ನಾನೇನು ಹೇಳಲ್ಲ. ನಾವೆಲ್ಲ ಹಿರಿಯರು, ನಾವು ಅರ್ಥ ಮಾಡಿಕೊಳ್ಳಬೇಕು. ಪದೇ ಪದೇ ಎಲ್ಲದಕ್ಕೂ ಉತ್ತರ ಕೊಡೋಕೆ ಆಗಲ್ಲ ಎಂದರು.
ರಾಜಕಾರಣ ಒಂದೊಂದು ಸಂದರ್ಭದಲ್ಲಿಯೂ ಬದಲಾವಣೆ ಆಗುತ್ತಿರುತ್ತದೆ. ಆದರೆ ಬಿಜೆಪಿಯವರು ನಮ್ಮ ಸಿಎಂ ಮೇಲೆ ಆರೋಪ ಮಾಡಿದ್ದಾರೆ. ಅಪಪ್ರಚಾರ ಮಾಡಿ, ಸರ್ಕಾರದ ಮೇಲೆ ಗೂಬೆ ಕೂರಿಸುವ ಕೆಲಸ ಮಾಡಿದ್ದರು. ಆದರೆ ಇಂದು ಸಿಎಂ ನಿರ್ದೋಷಿ ಎಂದು ತೀರ್ಪು ಬಂದಿದೆ ಎಂದು ಕಿಡಿಕಾರಿದರು.
ಸ್ಥಳೀಯ ಸಂಸ್ಥೆ ಚುನಾವಣೆ ಆಗಿಲ್ಲ. ಪಂಚಾಯತ್ ಚುನಾವಣೆ ಆಗಿಲ್ಲ. ಹೀಗಾಗಿ ಸ್ಥಳೀಯ ಆಡಳಿತದ ಮೇಲೆ ಹೆಚ್ಚು ಗಮನ ಹರಿಸಬೇಕು. ನಾವು ಸ್ಥಳೀಯ ಚುನಾವಣೆ ಮೇಲೆ ಗಮನ ಹರಿಸಬೇಕು. ಆದರೆ ಈ ವೇಳೆ ಹೈಕಮಾಂಡ್ನವರು ಏನು ತೀರ್ಮಾನ ತೆಗೆದುಕೊಳ್ಳುತ್ತಾರೆ ಎನ್ನುವುದು ಅವರಿಗೆ ಬಿಟ್ಟಿದ್ದು. ಈಗ ಯಾವುದೇ ಬದಲಾವಣೆ ಆಗಲ್ಲ ಅಂತ ಅನ್ನಿಸುತ್ತಿದೆ ಎಂದು ಹೇಳಿದರು.