ಇಂಫಾಲ, ಮಾ.02 (DaijiworldNews/AA): ಸಂಘರ್ಷ ಪೀಡಿತ ಮಣಿಪುರದ ಐದು ಜಿಲ್ಲೆಗಳಲ್ಲಿನ ಸಾರ್ವಜನಿಕರು 42 ಬಂದೂಕುಗಳನ್ನು ಒಪ್ಪಿಸಿದ್ದಾರೆ. ಜೊತೆಗೆ 5 ಅಕ್ರಮ ಬಂಕರ್ಗಳನ್ನು ಧ್ವಂಸಗೊಳಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇಂಫಾಲ ಪಶ್ಚಿಮ ಮತ್ತು ಪೂರ್ವ, ಚುರಚಂದ್ಪುರ, ಬಿಷ್ಣುಪುರ ಮತ್ತು ತಮೆಂಗ್ಲಾಂಗ್ ಜಿಲ್ಲೆಗಳಲ್ಲಿನ ಸಾರ್ವಜನಿಕರು ಶನಿವಾರ ಬಂದೂಕುಗಳನ್ನು ಒಪ್ಪಿಸಿದ್ದಾರೆ. ಬಿಷ್ಣುಪುರ ಜಿಲ್ಲೆಯಲ್ಲಿ 6 ಗ್ರೆನೇಡ್ಗಳು ಮತ್ತು 75ಕ್ಕೂ ಹೆಚ್ಚು ಮದ್ದುಗುಂಡುಗಳು, 5 ಬಂದೂಕುಗಳನ್ನು ಒಪ್ಪಿಸಲಾಗಿದೆ. ಹೈಂಗಂಗ್ಪೋಕ್ಷಿ, ಪೊರೊಂಪತ್, ಚುರಚಂದ್ಪುರ ಮತ್ತು ಲಾಮ್ನಾಂಗ್ ಪೊಲೀಸ್ ಠಾಣೆಗಳಲ್ಲಿ ಕನಿಷ್ಠ 10 ಬಂದೂಕುಗಳನ್ನು ಒಪ್ಪಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕಾಂಗ್ಪೋಕ್ಷಿ ಜಿಲ್ಲೆಯ ಥಿಂಗ್ಸಾಟ್ ಬೆಟ್ಟ ಶ್ರೇಣಿಯ ಮಾರ್ಕ್ ಬೆಟ್ಟದಲ್ಲಿದ್ದ 2 ಅಕ್ರಮ ಬಂಕರ್ ಹಾಗೂ ಕಾಂಗ್ಪೋಕ್ಷಿ ಮತ್ತು ಇಂಫಾಲ ಪೂರ್ವ ಜಿಲ್ಲೆಗಳ ಪಕ್ಕದ ಪ್ರದೇಶದ ವಾಕನ್ ಬೆಟ್ಟ ಶ್ರೇಣಿಯಲ್ಲಿದ್ದ 3 ಅಕ್ರಮ ಬಂಕರ್ಗಳು ಸೇರಿ ಒಟ್ಟು 5 ಅಕ್ರಮ ಬಂಕರ್ಗಳನ್ನು ಭದ್ರತಾ ಪಡೆಗಳು ಶನಿವಾರ ಧ್ವಂಸಗೊಳಿಸಿದೆ.
ಮಣಿಪುರ ರಾಜ್ಯಪಾಲ ಅಜಯ್ ಕುಮಾರ್ ಭಲ್ಲಾ ಅವರು, ಲೂಟಿ ಮಾಡಿದ ಮತ್ತು ಅಕ್ರಮವಾಗಿ ಇಟ್ಟುಕೊಂಡಿರುವ ಶಸ್ತ್ರಾಸ್ತ್ರಗಳನ್ನು ಫೆ.27 ರೊಳಗೆ ಸ್ವಯಂಪ್ರೇರಿತವಾಗಿ ಒಪ್ಪಿಸುವಂತೆ ಸ್ವಯಂಸೇವಕರು ಮತ್ತು ಬಂಡುಕೋರರಿಗೆ ಸೂಚಿಸಿದ್ದರು. ಆದರೆ ಶಸ್ತ್ರಾಸ್ತ್ರಗಳನ್ನು ಒಪ್ಪಿಸಲು ನೀಡಿದ ಗಡುವು ವಿಸ್ತರಿಸುವಂತೆ ಮೈತೇಯಿ ಮತ್ತು ಕುಕಿ ಸಮುದಾಯಗಳನ್ನು ಪ್ರತಿನಿಧಿಸುವ ಹಲವು ಸಂಘಟನೆಗಳು ರಾಜ್ಯಪಾಲ ಬಳಿ ಮನವಿ ಮಾಡಿಕೊಂಡಿದ್ದವು. ವಿವಿಧ ಸಂಘಟನೆಗಳ ಮನವಿ ಮೇರೆಗೆ ಗಡುವನ್ನು ಮಾರ್ಚ್ 6ರವರೆಗೆ ವಿಸ್ತರಿಸಿ ರಾಜ್ಯಪಾಲರು ಆದೇಶಿಸಿದ್ದರು.