ಗುಜರಾತ್, ಮಾ.02(DaijiworldNews/TA) : ಜಾಮನಗರ್ ಜಿಲ್ಲೆಯಲ್ಲಿರುವ ಅಂಬಾನಿ ಕುಟುಂಬದ ವನತಾರ ಪ್ರಾಣಿ ಸಂರಕ್ಷಣಾಲಯಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಭೇಟಿ ನೀಡಿದರು. ಪ್ರಾಣಿ ಸಂರಕ್ಷಣಾಲಯವು 3,000 ಎಕರೆ ಪ್ರದೇಶದಲ್ಲಿ ಸ್ಥಾಪಿತವಾಗಿದ್ದು, ರಿಲಾಯನ್ಸ್ ಜಾಮನಗರ್ ರಿಫೈನರಿ ಕಾಂಪ್ಲೆಕ್ಸ್ನ ಭಾಗವಾಗಿದೆ. ವಿಶಾಲವಾದ ಪರಿಸರದಲ್ಲಿ ಅನಂತ್ ಅಂಬಾನಿಯ ಮಹತ್ವಾಕಾಂಕ್ಷಿ ಯೋಜನೆಯಾದ ವನತಾರವು ಪ್ರಾಣಿಗಳ ಸಂರಕ್ಷಣೆಗಾಗಿ ಪ್ರಮುಖ ಕಾರ್ಯಗಳನ್ನು ನಡೆಸುತ್ತಿದೆ.

ಪ್ರಧಾನಿ ಮೋದಿ ಅವರು ಗುಜರಾತ್ನ ಎರಡು ದಿನಗಳ ಅಧಿಕೃತ ಪ್ರವಾಸದಲ್ಲಿ ಇದ್ದು, ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದಾರೆ. ಅವರು ಭಾನುವಾರ ಸೋಮನಾಥ ದೇವಸ್ಥಾನಕ್ಕೆ ಭೇಟಿ ನೀಡಿದ ನಂತರ, ಗಿರ್ ವನ್ಯಜೀವಿಧಾಮದಲ್ಲಿ ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಸಭೆಯಲ್ಲಿ ಪಾಲ್ಗೊಂಡಿದ್ದು ಬಳಿಕ, ಜಂಗಲ್ ಸಫಾರಿ ಮೂಲಕ ವನ್ಯಜೀವಿ ಸಂರಕ್ಷಣೆದಾರರೊಂದಿಗೆ ಮಾತುಕತೆ ನಡೆಸಲಿದ್ದಾರೆ.
ವನತಾರಕ್ಕೆ ‘ಪ್ರಾಣಿಮಿತ್ರ’ ಪ್ರಶಸ್ತಿ : ಅಂಬಾನಿಯ ವನತಾರ ಪ್ರಾಣಿ ಸಂರಕ್ಷಣಾಲಯವು ತನ್ನ ಕಾರ್ಯಗಳಿಗೆ 'ಪ್ರಾಣಿಮಿತ್ರ' ಎಂಬ ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದಿದೆ. ಈ ಪ್ರಶಸ್ತಿಯನ್ನು ವನತಾರದ ಭಾಗವಾದ ರಾಧೇಕೃಷ್ಣ ಟೆಂಪಲ್ ಎಲಿಫ್ಯಾಂಟ್ ವೆಲ್ಫೇರ್ ಟ್ರಸ್ಟ್ಗೆ ನೀಡಲಾಗಿದೆ,
ಆನೆ ಪಾಲನೆ ಮತ್ತು ಸಂರಕ್ಷಣೆಗೆ ವಿಶೇಷ ಕೇಂದ್ರ : ವನತಾರದಲ್ಲಿ ಆನೆಗಳನ್ನು ಸಂರಕ್ಷಿಸಲು ಪ್ರತ್ಯೇಕ ಕೇಂದ್ರವಿದೆ. 240 ಆನೆಗಳನ್ನು ವಿವಿಧ ಸ್ಥಳಗಳಿಂದ ಸಂರಕ್ಷಿಸಿ, ಸುರಕ್ಷಿತ ಪರಿಸರದಲ್ಲಿ ವಾಸಿಸುವಂತೆ ಮಾಡಿ, ಅವುಗಳನ್ನು ಪ್ರಾಕೃತಿಕ ಪರಿಸರದಲ್ಲಿ ಸಮೃದ್ಧವಾಗಿ ಜೀವನ ನಡೆಸಲು ಅವಕಾಶ ಮಾಡಿಕೊಡಲಾಗಿದೆ. ಅರಣ್ಯ ಪ್ರದೇಶದಲ್ಲಿ 998 ಎಕರೆ ಜಾಗದಲ್ಲಿ ಈ ಆನೆಗಳಿಗೆ ಸ್ವತಂತ್ರ ವಾಸವನ್ನು ಒದಗಿಸಲಾಗಿದೆ.
ಅಕ್ರಮವಾಗಿ ಬಂಧಿತ ಪ್ರಾಣಿಗಳ ಸಂರಕ್ಷಣೆಗೆ ಬದ್ಧತೆ : ಈ ಪ್ರಾಣಿ ಸಂರಕ್ಷಣಾಲಯವು ಆನೆಗಳು ಮಾತ್ರವಲ್ಲದೆ, ಇತರ ಪ್ರಾಣಿಗಳಿಗೂ ಆಶ್ರಯ ನೀಡುತ್ತದೆ. ಹಾನಿಗೊಳಗಾದ ಪ್ರಾಣಿಗಳ ಆರೈಕೆ, ಔಷಧೋಪಚಾರ ಮತ್ತು ಅವುಗಳನ್ನು ವನದಲ್ಲಿ ಬಿಟ್ಟು ಸಮೃದ್ಧ ಜೀವನ ನಡೆಸಲು ಸಹಾಯ ಮಾಡಲಾಗುತ್ತದೆ. ವನತಾರ ಪ್ರಾಣಿ ಸಂರಕ್ಷಣಾಲಯವು ಪ್ರಾಕೃತಿಕ ಪರಿಸರದಲ್ಲಿ ಪ್ರಾಣಿಗಳ ಸ್ವತಂತ್ರ ಜೀವನಕ್ಕೆ ಅನುವು ಮಾಡಿಕೊಡುವ ವಿಶ್ವಾಸಾರ್ಹ ಸಂಸ್ಥೆಯಾಗಿ ಹೆಸರುವಾಸಿಯಾಗಿದೆ.