ಬೆಂಗಳೂರು, ಮಾ.29 (DaijiworldNews/AA): ಗ್ಯಾರಂಟಿ ಯೋಜನೆಗಳನ್ನು ನೀಡಿ, ನಂತರ ಬೆಲೆ ಏರಿಕೆ ಮಾಡಿ ಹತ್ತು ಕೈಗಳಲ್ಲಿ ಬಾಚಿಕೊಳ್ಳುತ್ತಿರುವ ರಾಜ್ಯ ಸರ್ಕಾರದ ವಿರುದ್ಧ ಯುಗಾದಿ ಹಬ್ಬದ ಬಳಿಕ ಹೋರಾಟ ರೂಪಿಸಲಾಗುವುದು ಎಂದು ವಿಪಕ್ಷ ನಾಯಕ ಆರ್. ಅಶೋಕ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಬಜೆಟ್ ಮಂಡಿಸಿದ ಬಳಿಕ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿದ್ದಾರೆ. ವಿದ್ಯುತ್, ನೀರು, ಹಾಲಿನ ದರ ಏರಿಸಿ ಜನಸಾಮಾನ್ಯರಿಗೆ ಶಾಕ್ ನೀಡಿದ್ದಾರೆ ಎಂದು ಹೇಳಿದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಹಾಲಿನ ದರವನ್ನು ಮೂರು ಬಾರಿ ಏರಿಸಿ ಒಟ್ಟು 9 ರೂ. ಹೆಚ್ಚಳ ಮಾಡಿ ಜನರನ್ನು ಲೂಟಿ ಮಾಡಲಾಗಿದೆ. ಬಜೆಟ್ನಲ್ಲಿ ಯಾವುದೇ ತೆರಿಗೆಗಳನ್ನು ಹಾಕದೆ, ಗುಪ್ತ ಕಾರ್ಯಸೂಚಿ ಮಾಡಿ ಬಳಿಕ ತೆರಿಗೆ, ದರ ಹೆಚ್ಚಳ ಮಾಡಲಾಗಿದೆ. ಸರ್ಕಾರ ದಿವಾಳಿ ಆಗಿಲ್ಲವೆಂದರೆ ಯಾಕಿಷ್ಟು ದರ ಏರಿಸಲಾಗಿದೆ ಎಂದು ಪ್ರಶ್ನಿಸಿದ್ದಾರೆ.
ವಿದ್ಯುತ್ ದರ ನಾವು ಏರಿಸಿಲ್ಲ, ಕೋರ್ಟ್ ಆದೇಶ ಎಂದು ಸರ್ಕಾರ ಹೇಳುತ್ತಿದೆ. ಆದಾಗ್ಯೂ ಪಿಂಚಣಿ ಮತ್ತು ಗ್ರಾಚ್ಯುಟಿಗೆ ಸರ್ಕಾರ ಕೊಡದೆ, ಜನರಿಂದ ಕೊಡಿಸುತ್ತಿದಾರೆ. ಪಿಂಚಣಿ ಕೊಡುವ ಯೋಗ್ಯತೆ ಈ ಸರ್ಕಾರಕ್ಕಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.