ನವದೆಹಲಿ, ಜೂ. 24 (DaijiworldNews/AA): ರಾಜ್ಯದಲ್ಲಿ ಪ್ರತಿ ಸರ್ಕಾರದ ಸಂದರ್ಭದಲ್ಲಿ ಅಭಿವೃದ್ಧಿ ನೋಡುತ್ತಿದ್ದೆವು. ಆದರೆ ರಾಜ್ಯದಲ್ಲೀಗ ಅಭಿವೃದ್ಧಿ ಕುಂಠಿತವಾಗುತ್ತಿದೆ, ಯಾವುದೇ ಅಭಿವೃದ್ಧಿ ಕೆಲಸವಾಗುತ್ತಿಲ್ಲ. ಇತಿಹಾಸದಲ್ಲಿ ಮೊದಲ ಬಾರಿಗೆ ಅಭಿವೃದ್ಧಿ ಕೆಲಸ ಸ್ಥಗಿತವಾಗಿರುವ ಪರಿಸ್ಥಿತಿ ಕಾಣುತ್ತಿದ್ದೇವೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.

ಶಾಸಕರ ಬಿ.ಆರ್ ಪಾಟೀಲ್, ರಾಜು ಕಾಗೆ ಆರೋಪಗಳಿಗೆ ದೆಹಲಿಯಲ್ಲಿ ಪ್ರತಿಕ್ರಿಯಿಸಿದ ಅವರು, ಗ್ಯಾರಂಟಿಗೆ ಹಣ ಕೊಡುತ್ತೇವೆ ಎಂದು ಅದಕ್ಕೂ ಹಣ ನೀಡಿಲ್ಲ. ಎರಡು ವರ್ಷದ ಹಿಂದೆ ಅನುದಾನ ಕೊಟ್ಟರೂ ಅದರ ಆದೇಶ ಪ್ರತಿ ಇನ್ನು ಬಂದಿಲ್ಲ. ಸೋಮವಾರ ಗೃಹ ಸಚಿವ ಪರಮೇಶ್ವರ್ ಸರ್ಕಾರದಲ್ಲಿ ಹಣ ಇಲ್ಲ ಎಂದು ಹೇಳಿ ಇಂದು ಉಲ್ಟಾ ಹೊಡೆದಿದ್ದಾರೆ. ಕರ್ನಾಟಕ ಸರ್ಕಾರ ದಿವಾಳಿಯತ್ತ ಹೋಗುತ್ತಿದೆ ಎಂದು ಹೇಳಿದ್ದಾರೆ.
ಚರಂಡಿ ರಸ್ತೆ ಮಾಡಿಲ್ಲ, ಜನರ ಬಳಿ ಹೋಗಲು ಸಾಧ್ಯವಾಗುತ್ತಿಲ್ಲ ಎಂದು ಶಾಸಕ ಗೋಪಾಲಕೃಷ್ಣ ಹೇಳುತ್ತಾರೆ. ಬಿಆರ್ ಪಾಟೀಲ್ ಮನೆ ಬಂದಿಲ್ಲ ಎನ್ನುತ್ತಾರೆ. ಸರ್ಫರಾಜ್ ಖಾನ್ ಮಾತಾಡುವ ಅಡಿಯೊ ವೈರಲ್ ಆಗಿದೆ. ಆ ಮನೆಗಳು ಎಲ್ಲಿ ಹೋಗಿದೆ? ಕೇಂದ್ರ ಸರ್ಕಾರ ಮನೆಗಳು ಕೊಡುತ್ತಿದೆ. ಆದರೆ ರಾಜ್ಯದಿಂದ ಮನೆ ನೀಡಿಲ್ಲ. ಕೇಂದ್ರದಿಂದ ಮನೆಗಳು ಬಂದರೆ ಆ ಹಣದಲ್ಲಿ ಕಮಿಷನ್ ಹೊಡೆಯುತ್ತಿದ್ದಾರೆ ಎಂದರು.
ಕಾಂಗ್ರೆಸ್ ನಾಯಕರು ದೆಹಲಿಯ ಎಟಿಎಮ್ ಆಗಿ ಕೆಲಸ ಮಾಡುತ್ತಿದ್ದಾರೆ. ಕುರ್ಚಿ ಉಳಿಸಿಕೊಳ್ಳುವ ಕೆಲಸ ಆಗುತ್ತಿದೆ. ತಿಂಗಳಿಗೆ ಎರಡು ಬಾರಿ ಬಂದು ಹಣ ಕೊಟ್ಟು ಖುರ್ಚಿ ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಹೈಕಮಾಂಡ್ ಹಣ ಕೊಟ್ಟರೆ ಸುಮ್ಮನೆ ಇರುತ್ತಾರೆ. ಜಮೀರ್ ಅವರನ್ನು ಕೂಡಲೇ ಸಿದ್ದರಾಮಯ್ಯ ಸಂಪುಟದಿಂದ ಕೈ ಬಿಡಬೇಕು ಎಂದು ಆಗ್ರಹಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ ಈಗ ಮೊದಲಿನಂತೆ ಇಲ್ಲ. ಭ್ರಷ್ಟಾಚಾರ ಸರ್ಕಾರ ಮಾಡುತ್ತಿದ್ದಾರೆ. ಕಡೆಯ ಅವಕಾಶ ಎಂದು ಲೂಟಿ ಹೊಡೆಯುತ್ತಿದ್ದಾರೆ. ಕೆಟ್ಟ ಭ್ರಷ್ಟಾಚಾರ ರಾಜ್ಯದಲ್ಲಿ ತಾಂಡವವಾಡುತ್ತಿದೆ. ಇದು ದಪ್ಪ ಚರ್ಮದ ಸರ್ಕಾರ, ಎಷ್ಟೇ ಹೋರಾಟಗಳು ಮಾಡಿದರೂ ಏನು ಆಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.