ನವದೆಹಲಿ, ಜೂ. 25 (DaijiworldNews/TA): ಕೇಂದ್ರ ಗೃಹ ಸಚಿವ ಅಮಿತ್ ಶಾ , ತುರ್ತು ಪರಿಸ್ಥಿತಿ ರಾಷ್ಟ್ರೀಯ ಅವಶ್ಯಕತೆಯಲ್ಲ, ಬದಲಾಗಿ ಅದು ಕಾಂಗ್ರೆಸ್ಸಿನ ಪ್ರಜಾಪ್ರಭುತ್ವ ವಿರೋಧಿ ಮನಸ್ಥಿತಿಯ ಪ್ರತಿಬಿಂಬ ಎಂದು ಹೇಳಿದರು.

ಜೂನ್ 25, 1975 ರಂದು ಇಂದಿರಾ ಗಾಂಧಿ ಸರ್ಕಾರ ತುರ್ತು ಪರಿಸ್ಥಿತಿ ಹೇರಿದ ನಂತರ ಬಳಲಿದವರಿಗೆ ಗೌರವ ಸಲ್ಲಿಸಿದ ಶಾ, ಅಧಿಕಾರದಲ್ಲಿರುವವರು ಸರ್ವಾಧಿಕಾರಿಯಾದಾಗ, ಜನರು ಅವರನ್ನು ಉರುಳಿಸುವ ಶಕ್ತಿಯನ್ನು ಹೊಂದಿರುತ್ತಾರೆ ಎಂಬುದನ್ನು ಈ ದಿನ ಎಲ್ಲರಿಗೂ ನೆನಪಿಸುತ್ತದೆ ಎಂದು ಹೇಳಿದರು. ತುರ್ತು ಪರಿಸ್ಥಿತಿಯನ್ನು "ಕಾಂಗ್ರೆಸ್ಸಿನ ಅಧಿಕಾರದ ಹಸಿವಿನ ಅನ್ಯಾಯದ ಯುಗ" ಎಂದು ಗೃಹ ಸಚಿವರು ಹೇಳಿದರು.
ತುರ್ತು ಪರಿಸ್ಥಿತಿಯ ಸಮಯದಲ್ಲಿ ದೇಶವಾಸಿಗಳು ಎದುರಿಸಿದ ನೋವು ಮತ್ತು ಹಿಂಸೆಯ ಬಗ್ಗೆ ಹೊಸ ಪೀಳಿಗೆಗೆ ಅರಿವು ಮೂಡಿಸಲು ಮೋದಿ ಸರ್ಕಾರ ಈ ದಿನವನ್ನು 'ಸಂವಿಧಾನ ಹತ್ಯೆ ದಿವಸ್' ಎಂದು ಆಚರಿಸುತ್ತದೆ ಎಂದು ಅವರು ಹೇಳಿದರು.
"ಅಧಿಕಾರ ಸರ್ವಾಧಿಕಾರವಾದಾಗ, ಜನರು ಅದನ್ನು ಉರುಳಿಸುವ ಶಕ್ತಿಯನ್ನು ಹೊಂದಿರುತ್ತಾರೆ ಎಂದು ಈ ದಿನ ನಮಗೆ ನೆನಪಿಸುತ್ತದೆ" ಎಂಬುವುದಾಗಿ ಅವರು ಹಿಂದಿಯಲ್ಲಿ ಎಕ್ಸ್ನಲ್ಲಿ ಬರೆದಿದ್ದಾರೆ.