ಚಾಮರಾಜನಗರ, ಜೂ. 27 (DaijiworldNews/AA): ಮಲೆ ಮಹದೇಶ್ವರ ಬೆಟ್ಟದಲ್ಲಿ 5 ಹುಲಿಗಳ ಸಾವಿಗೆ ವಿಷಪ್ರಾಶನವೇ ಕಾರಣ ಎಂಬುದು ಮರಣೋತ್ತರ ಪರೀಕ್ಷೆಯಲ್ಲಿ ದೃಢವಾಗಿದೆ. ಇದೀಗ ಹುಲಿಗಳಿಗೆ ವಿಷ ಹಾಕಿದ್ದ ದುಷ್ಕರ್ಮಿಯೊಬ್ಬ ಸೇರಿ ಐದು ಮಂದಿಯನ್ನ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಕಿಡಿಗೇಡಿಗಳು ಸತ್ತ ಹಸುವಿನ ಕಳೇಬರದಲ್ಲಿ ವಿಷವಿಕ್ಕಿ ತಾಯಿ ಹಾಗೂ 4 ಮರಿ ಹುಲಿಗಳನ್ನು ಕೊಂದಿರೋದಾಗಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹೀರಾಲಾಲ್ ಖಚಿತಪಡಿಸಿದ್ದಾರೆ. ಹುಲಿ ದಾಳಿಯಿಂದ ಕೋಪಗೊಂಡ ಮಾಲೀಕ ಕಳ್ಳಬ್ಬೆದೊಡ್ಡಿ ಗ್ರಾಮದ ಶಿವಣ್ಣ ಹಸುವಿನ ಕಳೆಬರಕ್ಕೆ ವಿಷ ಸಿಂಪಡಣೆ ಮಾಡಿದ್ದ. ಈ ಕೃತ್ಯದಲ್ಲಿ ಶಿವಣ್ಣನ ಮಗನೂ ಭಾಗಿಯಾಗಿದ್ದ ಎನ್ನಲಾಗಿದೆ. ವಿಷ ಸಿಂಪಡಿಸಿದ್ದ ಕಳೆಬರವನ್ನು ತಿಂದು ಹುಲಿಗಳು ಸಾವನ್ನಪ್ಪಿವೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಇನ್ನೂ ಆರೋಪಿ ಶಿವಣ್ಣನನ್ನ ವಶಕ್ಕೆ ಪಡೆಯುತ್ತಿದ್ದಂತೆ ಮಗ ಎಸ್ಕೇಪ್ ಆಗಿದ್ದಾನೆ. ಶಿವಣ್ಣ ಜೊತೆಗೆ ಅದೇ ಗ್ರಾಮದ ಐವರನ್ನು ಅರಣ್ಯಾಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆ ನಡೆಸಲು ಮುಂದಾಗಿದ್ದಾರೆ.