ಭುವನೇಶ್ವರ, ಜೂ. 29 (DaijiworldNews/AA): ಒಡಿಶಾದ ಪುರಿ ಜಗನ್ನಾಥ ರಥಯಾತ್ರೆ ವೇಳೆ ಕಾಲ್ತುಳಿತ ಉಂಟಾಗಿ ಮೂವರು ಮೃತಪಟ್ಟಿದ್ದು, 50 ಮಂದಿ ಗಾಯಗೊಂಡಿರುವ ಘಟನೆ ಸಂಭವಿಸಿದೆ.

ಜಗನ್ನಾಥ ದೇವಾಲಯದಿಂದ ಸುಮಾರು ಮೂರು ಕಿಲೋಮೀಟರ್ ದೂರದಲ್ಲಿರುವ ಗುಂಡಿಚಾ ದೇವಾಲಯದ ಬಳಿ ಕಾಲ್ತುಳಿತ ಉಂಟಾಗಿ ಈ ದುರ್ಘಟನೆ ಸಂಭವಿಸಿದೆ. ಘಟನೆಯಲ್ಲಿ ಇಬ್ಬರು ಮಹಿಳೆಯರು ಸೇರಿ ಮೂವರು ಕೊನೆಯುಸಿರೆಳೆದಿದ್ದಾರೆ. ಮೃತರನ್ನು ಪ್ರಭಾತಿ ದಾಸ್, ಬಸಂತಿ ಸಾಹು ಹಾಗೂ ಪ್ರೇಮಕಾಂತ್ ಮೊಹಂತಿ ಎಂದು ಗುರುತಿಸಲಾಗಿದೆ.
ಮೃತಪಟ್ಟ ಮೂವರೂ ಒಡಿಶಾದ ಖುರ್ದಾ ಜಿಲ್ಲೆಯವರಾಗಿದ್ದು, ರಥಯಾತ್ರೆಗಾಗಿ ಪುರಿಗೆ ಬಂದಿದ್ದರು ಎಂದು ತಿಳಿದುಬಂದಿದೆ. ಇನ್ನು ಘಟನೆಯಲ್ಲಿ 50 ಮಂದಿ ಗಾಯಗೊಂಡಿದ್ದು, ಈ ಪೈಕಿ 6 ಮಂದಿಯ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ.
ಇಂದು ಮುಂಜಾನೆ 4:30ರ ವೇಳೆಗೆ ಕಾಲ್ತುಳಿತ ಸಂಭವಿಸಿದೆ. ಗುಂಡಿಚಾ ದೇವಾಲಯದ ಬಳಿ ರಥಯಾತ್ರೆಯನ್ನು ಕಣ್ತುಂಬಿಕೊಳ್ಳಲು ಭಕ್ತರು ಸೇರಿದ್ದರು. ರಥಗಳು ಭಕ್ತರನ್ನು ಸಮೀಪಿಸುತ್ತಿದ್ದಂತೆ ಜನಸಂದಣಿ ಹೆಚ್ಚಾಗಿ ಕಾಲ್ತುಳಿತ ಉಂಟಾಗಿದೆ ಎನ್ನಲಾಗಿದೆ.