ಬೆಂಗಳೂರು, ಜು. 03 (DaijiworldNews/ AK): ಡಿಕೆ ಶಿವಕುಮಾರ್ ಅವರು ಸಿಎಂ ಆಗಬೇಕೆಂಬ ಆಸೆ, ಭರವಸೆ ನನಗೂ ಇದೆ. ನಾಳೆಯೂ ಇರಲಿದೆ. ಒಂದು ದಿನ ಡಿ.ಕೆ ಶಿವಕುಮಾರ್ ಶ್ರಮಕ್ಕೆ ಫಲ ಸಿಗಲಿದೆ ಎಂದು ಮಾಜಿ ಸಂಸದ ಡಿ.ಕೆ ಸುರೇಶ್ ಹೇಳಿದರು.

ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ʻಐ ಹ್ಯಾವ್ ನೋ ಅದರ್ ಆಪ್ಷನ್ʼ ಎಂಬ ಡಿಕೆಶಿ ಹೇಳಿಕೆಗೆ ಪ್ರತಿಕ್ರಿಯಿಸಿದರು. ಡಿ.ಕೆ ಶಿವಕುಮಾರ್ ಕಾಂಗ್ರೆಸ್ ಪಕ್ಷದ ಒಬ್ಬ ಶಿಸ್ತಿನ ಸಿಪಾಯಿ. ಇದನ್ನ ಹಿಂದೆಯೂ ಹೇಳಿದ್ದಾರೆ, ಈಗಲೂ ಹೇಳಿದ್ದಾರೆ.. ಮುಂದೆಯೂ ಹೇಳುತ್ತಾರೆ. ಪಕ್ಷದ ಶಿಸ್ತನ್ನ ಪಾಲಿಸಿದ್ದಾರೆ,. ಡಿ.ಕೆ ಶಿವಕುಮಾರ್ ರದ್ದು ಅಸಹಾಯಕತೆ ಅಲ್ಲ. ಪಕ್ಷಕ್ಕೆ ಗೌರವ ಕೊಡೋದು, ನಾಯಕತ್ವಕ್ಕೆ ಗೌರವ ಕೊಡೋದು. ಪಕ್ಷದ ಅಧ್ಯಕ್ಷರಾಗಿ ನಿಷ್ಠೆಯಿಂದ ಕೆಲಸ ಮಾಡಿದ್ದಾರೆ. ನನಗೂ ಅವರು ಸಿಎಂ ಆಗಬೇಕು ಎಂಬ ಆಸೆ ಇದೆ. ಯಾವಾಗ ಏನು ಎಂಬುದನ್ನ ಹೈಕಮಾಂಡ್ ತೀರ್ಮಾನ ಮಾಡಲಿದೆ ಎಂದು ಹೇಳಿದರು.
ʻಐದು ವರ್ಷ ನಾನೇ ಸಿಎಂʼ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿ ಅವರು , ಸಿಎಂ ಹೇಳಿರೋದ್ರಲ್ಲಿ ತಪ್ಪೇನಿದೆ? ಸಿಎಂ ಆಗಿರೋರು ಸಿಎಂ ಆಗಿ ಮುಂದುವರೆಯುತ್ತೇನೆ ಅಂದ್ರೆ ತಪ್ಪೇನು? ಅವರು ಶಾಸಕಾಂಗ ಪಕ್ಷದ ನಾಯಕರು ಎಂದು ಸಮರ್ಥಿಸಿಕೊಂಡರು.
ಜನರು ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ಕೊಟ್ಟಿದ್ದಾರೆ. ನಾವು ಜನರ ಹಿತವನ್ನು ಕಾಪಾಡಬೇಕು. ಡಿ.ಕೆ ಶಿವಕುಮಾರ್, ಸಿದ್ದರಾಮಯ್ಯ ಚೆನ್ನಾಗಿದ್ದಾರೆ. ಇವತ್ತೂ ಚೆನ್ನಾಗಿದ್ದಾರೆ, ನಾಳೆಯೂ ಚೆನ್ನಾಗಿರ್ತಾರೆ. ನಮ್ಮ ಹಣೆಬರಹದಲ್ಲಿ ಬರೆದಿರಬೇಕು. ನೀನು ಸಿಎಂ, ಶಾಸಕ ಆಗಬೇಕೆಂದು ಇರಬೇಕು ಎಂದು ಹೇಳಿದರು.