ಬೆಂಗಳೂರು, ಆ. 10 (DaijiworldNews/AA): ಮಹಾದೇವಪುರದಲ್ಲಿ ಚುನಾವಣೆಯಲ್ಲಿ ಮತಗಳ್ಳತನ ಆಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ದಾಖಲೆ ನೀಡುವಂತೆ ರಾಹುಲ್ ಗಾಂಧಿಗೆ ಚುನಾವಣಾ ಆಯೋಗ ನೋಟಿಸ್ ಕಳುಹಿಸಿದೆ.

ಸುದ್ದಿಗೋಷ್ಠಿಯಲ್ಲಿ ನೀವು ಚುನಾವಣಾ ಆಯೋಗದ ದಾಖಲೆಗಳಿಂದ ಬಂದಿವೆ ಎಂದು ಹೇಳಿದ್ದೀರಿ. ಇದು ಚುನಾವಣಾ ಆಯೋಗದ ಡೇಟಾನಾ ಎಂದು ಕಾಂಗ್ರೆಸ್ ನಾಯಕನಿಗೆ ಚುನಾವಣಾ ಆಯೋಗ ಪ್ರಶ್ನೆ ಮಾಡಿದೆ.
ಮತಗಟ್ಟೆ ಅಧಿಕಾರಿ ನೀಡಿದ ದಾಖಲೆಗಳ ಪ್ರಕಾರ, ಶಕುನ್ ರಾಣಿ ಎರಡು ಬಾರಿ ಮತ ಚಲಾಯಿಸಿದ್ದಾರೆ ಎಂದು ನೀವು ಹೇಳಿದ್ದೀರಿ. 'ಈಸ್ ಐಡಿ ಕಾರ್ಡ್ ಪರ್ ದೋ ಬಾರ್ ವೋಟ್ ಲಗಾಹೈ, ವೋ ಜೋ ಟಿಕ್ ಹೈ, ಪೋಲಿಂಗ್ ಬೂತ್ ಕೆ ಆಫೀಸರ್ ಕಿಹೈ' ಎಂದು ಹೇಳಿದ್ದೀರಿ. ಆದರೆ, ಶಕುನ್ ರಾಣಿ ಅವರು ನೀವು ಆರೋಪಿಸಿದಂತೆ ಎರಡು ಬಾರಿ ಅಲ್ಲ, ಒಮ್ಮೆ ಮಾತ್ರ ಮತ ಚಲಾಯಿಸಿದ್ದಾರೆ ಎಂದು ಚುನಾವಣಾ ಆಯೋಗ ಸ್ಪಷ್ಟನೆ ನೀಡಿದೆ.
ಪ್ರಾಥಮಿಕ ವಿಚಾರಣೆಯಲ್ಲಿ, ನೀವು ಪ್ರಸ್ತುತಿಯಲ್ಲಿ ತೋರಿಸಿರುವ ಟಿಕ್ ಗುರುತು ಮಾಡಿದ ದಾಖಲೆಯು ಮತಗಟ್ಟೆ ಅಧಿಕಾರಿ ನೀಡಿದ ದಾಖಲೆಯಲ್ಲ. ಹಾಗಾಗಿ, ಶಕುನ್ ರಾಣಿಯೋ ಅಥವಾ ಬೇರೆ ಯಾರಾದರೂ ಎರಡು ಬಾರಿ ಮತ ಚಲಾಯಿಸಿದ್ರೆ ನೀವು ದಾಖಲೆಗಳನ್ನು ಒದಗಿಸಿ. ಆಗ ಚುನಾವಣಾ ಆಯೋಗ ವಿಚಾರಣೆ ನಡೆಸಲಿದೆ ಎಂದು ಹೇಳಿದೆ.