ಬೆಂಗಳೂರು, ಆ. 11 (DaijiworldNews/AA): ಇಂದಿನಿಂದ ವಿಧಾನಮಂಡಲ ಅಧಿವೇಶನ ಪ್ರಾರಂಭವಾಗಲಿದೆ. ಸರ್ಕಾರ ಹಾಗೂ ವಿಪಕ್ಷಗಳ ನಡುವೆ ಮಹಾಕದನಕ್ಕೆ ಅಧಿವೇಶನ ವೇದಿಕೆಯಾಗುವ ಸಾಧ್ಯತೆ ಇದೆ.

ಇಂದಿನಿಂದ ಆಗಸ್ಟ್ 22 ರವರೆಗೂ ಅಧಿವೇಶನ ನಡೆಯಲಿದೆ. ಸರ್ಕಾರವನ್ನ ಕಟ್ಟಿ ಹಾಕಲು ವಿಪಕ್ಷಗಳು ಸಿದ್ಧವಾಗಿವೆ.
ಭಾನುವಾರ ಬಿಜೆಪಿ-ಜೆಡಿಎಸ್ ಪ್ರಮುಖ ನಾಯಕರಿಂದ ಸದನದಲ್ಲಿ ಹೋರಾಟದ ಬಗ್ಗೆ ಚರ್ಚೆಯ ವಿಷಯಗಳ ಪ್ರಸ್ತಾಪವಾಗಿದೆ. ಸರ್ಕಾರದ ವಿರುದ್ಧ ಒಂದಾಗಿ ಹೋರಾಡಲು ಎರಡು ಪಕ್ಷಗಳಿಂದ ಚರ್ಚೆ ನಡೆದಿದೆ ಎನ್ನಲಾಗಿದೆ. ವಿಪಕ್ಷಗಳ ಅಸ್ತ್ರಕ್ಕೆ ಪ್ರತಿ ಅಸ್ತ್ರ ಹೂಡಲು ಸರ್ಕಾರದಿಂದಲೂ ಸಿದ್ಧತೆ ನಡೆದಿದೆ.
ಚಿನ್ನಸ್ವಾಮಿ ಕಾಲ್ತುಳಿತ ಪ್ರಕರಣ, ರಾಜ್ಯದಲ್ಲಿ ರಸಗೊಬ್ಬರದ ಕೊರತೆಯಿಂದ ರೈತರಿಗೆ ಸಮಸ್ಯೆ, ಧರ್ಮಸ್ಥಳದ ಕೊಲೆಗಳ ಪ್ರಕರಣ, SCSP-TSP ಹಣವನ್ನ ಗ್ಯಾರಂಟಿ ಬಳಕೆ ಮಾಡಿಕೊಂಡಿರೋ ವಿಚಾರ, ವಿಪಕ್ಷಗಳ ಶಾಸಕರಿಗೆ ಅನುದಾನ ಕೊಡದೇ ಕೇವಲ ಆಡಳಿತ ಪಕ್ಷದ ಶಾಸಕರಿಗೆ ಮಾತ್ರ ಅನುದಾನ ಕೊಟ್ಟಿರೋ ವಿಚಾರ, ಮೈಸೂರಿನಲ್ಲಿ ಡ್ರಗ್ಸ್ ಫ್ಯಾಕ್ಟರಿ ಪತ್ತೆ, ಮಂಗಳೂರು ದ್ವೇಷದ ಕೊಲೆ ಸೇರಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿರೋ ವಿಚಾರ, ಕಾಂಗ್ರೆಸ್ನಲ್ಲಿ ಸಿಎಂ ಕುರ್ಚಿಯ ಕಿತ್ತಾಟ, ರಾಹುಲ್ ಗಾಂಧಿಯ ಮತಗಳ್ಳತನ ಆರೋಪಕ್ಕೆ ಸಚಿವ ರಾಜಣ್ಣ, ಇಬ್ರಾಹಿಂ ಹೇಳಿಕೆಗಳಂತಹ ವಿಷಯಗಳನ್ನು ವಿಪಕ್ಷಗಳು ಅಸ್ತ್ರವಾಗಿ ಉಪಯೋಗಿಸಲಿದೆ.