ನವದೆಹಲಿ, ಆ. 16 (DaijiworldNews/AA): ಆಕ್ಸಿಯಂ ಸ್ಪೇಸ್ ಮಿಷನ್ ಬಳಿಕ ಮೊದಲ ಬಾರಿಗೆ ಭಾರತಕ್ಕೆ ಗಗನಯಾತ್ರಿ ಶುಭಾಂಶು ಶುಕ್ಲಾ ಅವರು ಭಾನುವಾರ ಮರಳಲಿದ್ದಾರೆ.

ಈ ವೇಳೆ ಶುಭಾಂಶು ಶುಕ್ಲಾ ಅವರು ಪ್ರಧಾನಿ ಮೋದಿಯನ್ನು ಭೇಟಿಯಾಗಲಿದ್ದಾರೆ. ನಂತರ ತಮ್ಮ ತವರೂರಾದ ಉತ್ತರ ಪ್ರದೇಶದ ಲಖನೌಗೆ ತೆರಳಿದ್ದಾರೆ ಎಂದು ಹೇಳಲಾಗಿದೆ. 2027ರಲ್ಲಿ ಇಸ್ರೋ ತನ್ನ ಮೊದಲ ಮಾನವ ಸಹಿತ ಬಾಹ್ಯಾಕಾಶ ಗಗನಯಾನವನ್ನು ಎದುರು ನೋಡುತ್ತಿರುವುದರಿಂದ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಐತಿಹಾಸಿಕ ಭೇಟಿ ನೀಡಿದ್ದ ಶುಕ್ಲಾ ಅವರು ತಮ್ಮ ಅನುಭವಗಳನ್ನು ಸ್ನೇಹಿತರು ಹಾಗೂ ಸಹೋದ್ಯೋಗಿಗಳೊಂದಿಗೆ ಹಂಚಿಕೊಳ್ಳಲಿದ್ದಾರೆ.
ಇದೀಗ ಶುಭಾಂಶು ಶುಕ್ಲಾ ಅವರು ವಿಮಾನದಲ್ಲಿ ಕುಳಿತಿರುವ ಫೋಟೋವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೇ, "ನಾನು ಭಾರತಕ್ಕೆ ಹಿಂತಿರುಗಲು ವಿಮಾನದಲ್ಲಿ ಕುಳಿತಾಗ, ನನ್ನ ಹೃದಯದಲ್ಲಿ ಮಿಶ್ರ ಭಾವನೆ ಉಂಟಾಗಿದೆ. ಕಳೆದ ಒಂದು ವರ್ಷದಿಂದ ಈ ಕಾರ್ಯಾಚರಣೆಯ ಸಮಯದಲ್ಲಿ ನನ್ನ ಸ್ನೇಹಿತರು ಮತ್ತು ಕುಟುಂಬವಾಗಿದ್ದ ಅದ್ಭುತ ಜನರನ್ನು ಬಿಟ್ಟು ಹೋಗುವುದು ನನಗೆ ದುಃಖ ತಂದಿದೆ. ಹಾಗೆಯೇ ಕಾರ್ಯಾಚರಣೆಯ ನಂತರ ಮೊದಲ ಬಾರಿಗೆ ನನ್ನ ಎಲ್ಲಾ ಸ್ನೇಹಿತರು, ಕುಟುಂಬ ಮತ್ತು ದೇಶದ ಪ್ರತಿಯೊಬ್ಬರನ್ನು ಭೇಟಿಯಾಗಲು ತುಂಬಾ ಉತ್ಸುಕನಾಗಿದ್ದೇನೆ. ಜೀವನ ಎಂದರೆ ಇದೇ ಎಂದು ನಾನು ಭಾವಿಸುತ್ತೇನೆ" ಎಂದು ಪೋಸ್ಟ್ ಮಾಡಿದ್ದಾರೆ.