ನವದೆಹಲಿ, ಆ. 20 (DaijiworldNews/ AK): ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾರ ಅಧಿಕೃತ ನಿವಾಸದಲ್ಲಿ ನಡೆಯುತ್ತಿರುವ ‘ಜನ್ ಸುನ್ವಾಯಿ ’ ಕಾರ್ಯಕ್ರಮದ ವೇಳೆ ಸಿಎಂ ರೇಖಾ ಮೇಲೆ ಹಲ್ಲೆ ನಡೆಸಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಸಿವಿಲ್ ಲೈನ್ಸ್ ಬಳಿಯಿರುವ ತಮ್ಮ ನಿವಾಸದಲ್ಲಿ ಜನ ಸಂದರ್ಶನ ಕಾರ್ಯಕ್ರಮದ ವೇಳೆ ಈ ಘಟನೆ ನಡೆದಿದೆ. 30 ವರ್ಷದ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ದೂರುದಾರನಂತೆ ಬಂದಿದ್ದ ವ್ಯಕ್ತಿಯೊಬ್ಬ ಅವರ ಮೇಲೆ ಹಲ್ಲೆ ನಡೆಸಿದ್ದಾನೆ. ಮನವಿ ಕೊಡುವ ನೆಪದಲ್ಲಿ ಬಂದು ಏಕಾಏಕಿ ಕೂಗಾಡಿ, ಕಪಾಳಮೋಕ್ಷ ಮಾಡಿದ್ದಾನೆ. ಕೂಡಲೇ ವ್ಯಕ್ತಿಯನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಸಿವಿಲ್ ಲೈನ್ಸ್ ಪೊಲೀಸ್ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸುತ್ತಿದ್ದಾರೆ. ಘಟನೆಯ ಹಿಂದಿನ ಕಾರಣ ಇನ್ನೂ ತಿಳಿದು ಬಂದಿಲ್ಲ. ಇನ್ನೂ ದೆಹಲಿಯ ಮುಖ್ಯಮಂತ್ರಿ ರೇಖಾ ಗುಪ್ತಾ ಮೇಲಿನ ದಾಳಿಯನ್ನು ಮಾಜಿ ಸಿಎಂ ಅತಿಶಿ ಖಂಡಿಸಿದ್ದಾರೆ. ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ಸಿಎಂ ಮೇಲಿನ ದಾಳಿ ಅತ್ಯಂತ ಖಂಡನೀಯ. ಪ್ರಜಾಪ್ರಭುತ್ವದಲ್ಲಿ ಭಿನ್ನಾಭಿಪ್ರಾಯ ಮತ್ತು ಪ್ರತಿಭಟನೆಗೆ ಅವಕಾಶವಿದೆ. ಆದರೆ ಹಿಂಸಾಚಾರಕ್ಕೆ ಸ್ಥಳವಿಲ್ಲ. ದೆಹಲಿ ಪೊಲೀಸರು ಅಪರಾಧಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಾರೆ ಎಂದು ಆಶಿಸುತ್ತೇನೆ ಎಂದಿದ್ದಾರೆ.
ಆರೋಪಿ ಯಾರು?
ಪ್ರಾಥಮಿಕ ತನಿಖೆಯ ಪ್ರಕಾರ, ದಾಳಿಕೋರನನ್ನು ಗುಜರಾತ್ನ ರಾಜ್ಕೋಟ್ ನಿವಾಸಿ ರಾಜೇಶ್ಭಾಯ್ ಕಿಮ್ಜಿಭಾಯ್ (41) ಎಂದು ಗುರುತಿಸಲಾಗಿದೆ. ಮೂಲಗಳ ಪ್ರಕಾರ, ಅವರ ಸಂಬಂಧಿಕರೊಬ್ಬರು ಪ್ರಸ್ತುತ ಜೈಲಿನಲ್ಲಿದ್ದಾರೆ ಮತ್ತು ಅವರು ಬಿಡುಗಡೆ ಕೋರಿ ಅರ್ಜಿಯೊಂದಿಗೆ ಬಂದಿದ್ದರು, ಈ ವಿಷಯ ಇನ್ನೂ ನ್ಯಾಯಾಲಯದಲ್ಲಿ ಬಾಕಿ ಇದೆ. ಮುಖ್ಯಮಂತ್ರಿಯನ್ನು ಭೇಟಿ ಮಾಡಲು ಅವರು ನ್ಯಾಯಾಲಯದ ದಾಖಲೆಗಳನ್ನು ತಮ್ಮೊಂದಿಗೆ ತಂದಿದ್ದರು ಎಂದು ಮೂಲಗಳು ಬಹಿರಂಗಪಡಿಸಿವೆ. ಫೈಲ್ನಲ್ಲಿ ಕಾನೂನು ದಾಖಲೆಗಳು ಮಾತ್ರ ಇದ್ದವು.
ಹಲ್ಲೆಯ ಹಿಂದಿನ ನಿಖರವಾದ ಉದ್ದೇಶ ಇನ್ನೂ ದೃಢಪಟ್ಟಿಲ್ಲ. ಆರೋಪಿಯನ್ನು ಬಂಧಿಸಲಾಗಿದ್ದು, ಪ್ರಸ್ತುತ ಸಿವಿಲ್ ಲೈನ್ಸ್ ಪೊಲೀಸ್ ಠಾಣೆಯಲ್ಲಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೂಲಗಳ ಪ್ರಕಾರ, ಆರೋಪಿಯ ಹೆಸರು ಮತ್ತು ವಿಳಾಸ ಸೇರಿದಂತೆ ಒದಗಿಸಿದ ವಿವರಗಳನ್ನು ಪರಿಶೀಲಿಸಲು ದೆಹಲಿ ಪೊಲೀಸರು ಗುಜರಾತ್ ಪೊಲೀಸರನ್ನು ಸಂಪರ್ಕಿಸಿದ್ದಾರೆ. ಪ್ರಸ್ತುತ ಪರಿಶೀಲನೆ ನಡೆಯುತ್ತಿದೆ.