ಚಿಕ್ಕೋಡಿ, ಆ. 26 (DaijiworldNews/AA): ಬಿಜೆಪಿಯಲ್ಲಿ ಎರಡು ಗುಂಪುಗಳಿವೆ. ಅವರಲ್ಲಿಯೇ ಧರ್ಮಸ್ಥಳದ ವಿರುದ್ಧ ಪರ- ವಿರೋಧವಿದೆ. ಇದರಿಂದಾಗಿ, ಧರ್ಮಸ್ಥಳ ಕ್ಷೇತ್ರದ ಬಗ್ಗೆ ಅಪಪ್ರಚಾರ ನಡೆಯುತ್ತಿದೆ ಸಚಿವ ಸತೀಶ್ ಜಾರಕಿಹೊಳಿ ಆರೋಪ ಮಾಡಿದ್ದಾರೆ.

ಜಿಲ್ಲೆಯ ಅಥಣಿ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯಲ್ಲಿ ಎರಡು ತಂಡಗಳಿವೆ. ಅದರಲ್ಲಿ ಒಂದು ತಂಡ ಕ್ಷೇತ್ರದ ಬಗ್ಗೆ ಅಪಪ್ರಚಾರ ಮಾಡುತ್ತಿದೆ. ಇದೆಲ್ಲವೂ ರಾಜಕೀಯ ಲಾಭ ಪಡೆಯಲು ಮಾಡಲಾಗುತ್ತಿದೆ ಎಂದು ತಿಳಿಸಿದರು.
ಮುಂದುವರೆದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಸದನದಲ್ಲಿ ಆರ್ಎಸ್ಎಸ್ ಪ್ರಾರ್ಥನೆ ಗೀತೆ ಹಾಡಿದ ವಿಚಾರವಾಗಿ ಪ್ರತಕ್ರಿಯಿಸಿದ ಅವರು, "ಅದು ಅವರ ವೈಯಕ್ತಿಕ. ಇದನ್ನು ಪಕ್ಷಕ್ಕೆ ಅಂಟಿಸಿದರೆ ಏನು ಉತ್ತರ ಕೊಡಬೇಕು? ಹೊರಗೆ ಹಲವು ವಿಚಾರ ಮಾತನಾಡುತ್ತಾರೆ. ಅವರ ವೈಯಕ್ತಿಕ ವಿಚಾರಕ್ಕೆ ಸರ್ಕಾರ ಹೇಗೆ ಉತ್ತರ ಕೊಡುತ್ತದೆ? ಅದು ಅವರ ವೈಯಕ್ತಿಕ. ಪಕ್ಷ ಈ ಕುರಿತು ಏನೂ ನಿರ್ದೇಶನ ನೀಡಿಲ್ಲ. ಕಳೆದ 70 ವರ್ಷಗಳಿಂದ ಸದನದಲ್ಲಿ ಕೆಲವರು ವೈಯಕ್ತಿಕ ವಿಷಯಗಳನ್ನಿಟ್ಟುಕೊಂಡು ಮಾತನಾಡುತ್ತಾರೆ. ಎಲ್ಲವನ್ನೂ ಮಾತನಾಡಲು ಸದನ ಅವಕಾಶ ನೀಡಿದೆ" ಎಂದು ಹೇಳಿದರು.
ಬೆಳಗಾವಿ ಜಿಲ್ಲೆ ವಿಭಜನೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, "ನಾವು ಕೂಡ ಬೆಳಗಾವಿ ಜಿಲ್ಲೆ ವಿಭಜನೆಗೆ ಒತ್ತು ನೀಡಿದ್ದೇವೆ. ಸಿಎಂ ಸಿದ್ದರಾಮಯ್ಯ ಅವರ ಗಮನಕ್ಕೂ ತಂದಿದ್ದೇವೆ. ಜಿಲ್ಲೆಯ ಎಲ್ಲಾ ಶಾಸಕರ ನಿಯೋಗ ಮುಖ್ಯಮಂತ್ರಿಯನ್ನು ಭೇಟಿಯಾಗಿದ್ದೇವೆ. ಆದಷ್ಟು ಬೇಗನೆ ಜಿಲ್ಲೆ ವಿಭಜನೆ ಆದರೆ ಒಳ್ಳೆಯದು. ವಿಭಜನೆ ಆಗುವುದು ಖಂಡಿತ ಕಾಯಬೇಕು" ಎಂದರು.