ಶ್ರೀನಗರ, ಆ. 26 (DaijiworldNews/AK): ತ್ರಿಕೂಟ ಬೆಟ್ಟಗಳ ಮೇಲಿರುವ ಮಾತಾ ವೈಷ್ಣೋದೇವಿ ದೇಗುಲಕ್ಕೆ ಹೋಗುವ ಮಾರ್ಗದಲ್ಲಿ ಭೂಕುಸಿತ ಸಂಭವಿಸಿ ಐವರು ಸಾವನ್ನಪ್ಪಿದ್ದು, 14 ಜನರು ಗಾಯಗೊಂಡಿದ್ದಾರೆ.

ಈ ಘಟನೆಯ ನಂತರ ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯಲ್ಲಿರುವ ಈ ಪವಿತ್ರ ದೇವಾಲಯಕ್ಕೆ ತೀರ್ಥಯಾತ್ರೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೆಟ್ಟದ ತುದಿಯಲ್ಲಿರುವ ದೇವಾಲಯಕ್ಕೆ ಸುಮಾರು 12 ಕಿ.ಮೀ. ಪಾದಯಾತ್ರೆಯ ಅರ್ಧ ದಾರಿಯಲ್ಲೇ, ಮಧ್ಯಾಹ್ನ 3 ಗಂಟೆ ಸುಮಾರಿಗೆ ಭೂಕುಸಿತ ಸಂಭವಿಸಿದ ಅಧ್ಕ್ವರಿಯಲ್ಲಿರುವ ಇಂದರ್ಪ್ರಸ್ಥ ಭೋಜನಾಲಯದ ಬಳಿ ಬೃಹತ್ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.
ಹಿಮಕೋಟಿ ಚಾರಣ ಮಾರ್ಗದ ಯಾತ್ರೆಯನ್ನು ಈಗಾಗಲೇ ದಿನಪೂರ್ತಿ ಸ್ಥಗಿತಗೊಳಿಸಲಾಗಿತ್ತು. ಮಧ್ಯಾಹ್ನ 1:30 ರ ವರೆಗೆ ಯಾತ್ರಿಕರು ಹಳೆಯ ಮಾರ್ಗದಲ್ಲಿಯೇ ಮುಂದುವರಿದರು. ಆದರೆ, ಧಾರಾಕಾರ ಮಳೆಯಿಂದಾಗಿ ಅಧಿಕಾರಿಗಳು ಅದನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿದರು.
ಜಮ್ಮು ಮತ್ತು ಕಾಶ್ಮೀರದ ಹಲವು ಭಾಗಗಳಲ್ಲಿ ಸತತ ಮೂರು ದಿನಗಳ ಭಾರೀ ಮಳೆಯಿಂದಾಗಿ ಅಪಾರ ಹಾನಿಯಾಗಿದೆ. ಇಂದು ಮುಂಜಾನೆ ದೋಡಾ ಜಿಲ್ಲೆಯಲ್ಲಿ ಮೇಘಸ್ಫೋಟಕ್ಕೆ ನಾಲ್ವರು ಸಾವನ್ನಪ್ಪಿದ್ದು, 24 ಗಂಟೆಗಳಲ್ಲಿ ಒಟ್ಟು ಸಾವುಗಳ ಸಂಖ್ಯೆ 9 ಕ್ಕೆ ತಲುಪಿದೆ.