ಛತ್ತೀಸಗಢ, ಆ. 27 (DaijiworldNews/AA): ಪ್ರವಾಹದಲ್ಲಿ ಸಿಲುಕಿಕೊಂಡಿದ್ದ 22 ಸಿಆರ್ಪಿಎಫ್ ಸಿಬ್ಬಂದಿ ಮತ್ತು ಮೂವರು ನಾಗರಿಕರನ್ನು ಭಾರತೀಯ ಸೇನಾ ಹೆಲಿಕಾಪ್ಟರ್ ರಕ್ಷಣಾ ಕಾರ್ಯಾಚರಣೆ ನಡೆಸಿ ರಕ್ಷಿಸಿದ ಘಟನೆ ಪಂಜಾಬ್ನ ಪಠಾಣ್ಕೋಟ್ ಜಿಲ್ಲೆಯ ಮಾಧೋಪುರ್ ಹೆಡ್ವರ್ಕ್ಸ್ ಬಳಿ ಬುಧವಾರ ಸಂಭವಿಸಿದೆ.

ಸವಾಲಿನ ಹವಾಮಾನದ ಹೊರತಾಗಿಯೂ ರಕ್ಷಣಾ ಕಾರ್ಯ ಕೈಗೊಳ್ಳಲು ಬುಧವಾರ ಬೆಳಗ್ಗೆ 6 ಗಂಟೆಗೆ ಹೆಲಿಕಾಪ್ಟರ್ಗಳನ್ನು ಘಟನಾ ಸ್ಥಳಕ್ಕೆ ಕಳುಹಿಸಲಾಯಿತು. ಪ್ರವಾಹದಲ್ಲಿ ಸಿಲುಕಿಕೊಂಡಿದ್ದವರನ್ನು ರಕ್ಷಿಸಿ, ಅವರನ್ನು ಸುರಕ್ಷಿತ ಸ್ಥಳಕ್ಕೆ ಕರೆತರಲಾಗಿದೆ ಎಂದು ಸೇನೆಯು ಮಾಹಿತಿ ನೀಡಿದೆ.
ಸ್ಥಳಾಂತರಿಸಿದ ಸ್ವಲ್ಪ ಸಮಯದ ನಂತರ ಸಿಬ್ಬಂದಿ ಆಶ್ರಯ ಪಡೆದಿದ್ದ ಕಟ್ಟಡ ಕುಸಿದು ಬಿದ್ದಿದೆ. ಸಮಯಕ್ಕೆ ಸರಿಯಾಗಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದರಿಂದ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರೀ ಮಳೆ ಸುರಿಯುತ್ತಿರುವ ಹಿನ್ನೆಲೆ ಸಟ್ಲೆಜ್, ಬಿಯಾಸ್, ಉಜ್ ಮತ್ತು ರಾವಿ ನದಿಗಳು ಉಕ್ಕಿ ಹರಿಯುತ್ತಿವೆ. ಪಠಾಣ್ಕೋಟ್, ಹೋಶಿಯಾರ್ಪುರ, ಗುರುದಾಸ್ಪುರ್, ಕಪುರ್ತಲಾ, ಫಜಿಲ್ಕಾ, ತರಣ್ ತರಣ್ ಮತ್ತು ಫಿರೋಜ್ಪುರ ಸೇರಿದಂತೆ ಪಂಜಾಬ್ ಜಿಲ್ಲೆಗಳಲ್ಲಿ ಪ್ರವಾಹ ಉಂಟಾಗಿದೆ.
"ಜಮ್ಮು ಮತ್ತು ಕಾಶ್ಮೀರದಲ್ಲಿ ನಿರಂತರ ಮಳೆಯಿಂದಾಗಿ ಪಠಾಣ್ಕೋಟ್ನಲ್ಲಿ ನೀರಿನ ಮಟ್ಟ ಹೆಚ್ಚಾಗಿದೆ. ಪಠಾಣ್ಕೋಟ್ನಲ್ಲಿರುವ ರಾಧಾ ಸ್ವಾಮಿ ಸತ್ಸಂಗ್ ಬಿಯಾಸ್ ಅನ್ನು ಸ್ಥಳಾಂತರಿಸುವ ಕೇಂದ್ರವೆಂದು ನಾವು ಗುರುತಿಸಿದ್ದೇವೆ. ನಾವು ಜನರನ್ನು ಸ್ಥಳಾಂತರಿಸುತ್ತೇವೆ. ಆಹಾರಕ್ಕಾಗಿ ಸರಿಯಾದ ವ್ಯವಸ್ಥೆಗಳನ್ನು ಸಹ ಮಾಡಲಾಗಿದೆ" ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಹರ್ದೀಪ್ ಸಿಂಗ್ ತಿಳಿಸಿದ್ದಾರೆ.