ವಿಜಯಪುರ, ಅ. 31 (DaijiworldNews/AA): ಬಿಜೆಪಿಗರು ಹುಟ್ಟು ಸುಳ್ಳುಗಾರರು. ಬಿಜೆಪಿಯವರು ದೇಶದಲ್ಲಿ ಸುಳ್ಳು ಸೃಷ್ಟಿ ಮಾಡುವ ಫ್ಯಾಕ್ಟರಿ ಇಟ್ಟುಕೊಂಡಿದ್ದಾರೆ. ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಪ್ರಿನ್ಸಿಪಾಲ್ ಎಂದು ಬಿಜೆಪಿ ವಿರುದ್ಧ ಸಚಿವ ರಾಮಲಿಂಗಾರೆಡ್ಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಉತ್ತರ ಕರ್ನಾಟಕಕ್ಕೆ ಪ್ರವಾಹ ಪರಿಹಾರದಲ್ಲಿ ಕಾಂಗ್ರೆಸ್ ಸರ್ಕಾರ ವಿಳಂಬ ಎಂಬ ಬಿಜೆಪಿ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, "ವಯನಾಡಿನಲ್ಲಿ ಸಂಸದೆ ಪ್ರಿಯಾಂಕಾ ಗಾಂಧಿ ಇರೋದರಿಂದ ಬಿಜೆಪಿಗೆ ಹೊಟ್ಟೆ ಉರಿ. ಬಿಜೆಪಿ ಅಂದ್ರೆ ಬುರುಡೆ ಜನರ ಪಕ್ಷ. ಸಾರಿಗೆ ಇಲಾಖೆಯಿಂದ, ರೈಲ್ವೆಯಿಂದ ಕಡಿಮೆ ಖರ್ಚಿನಲ್ಲಿ ಪ್ರವಾಸ ಕೈಗೊಳ್ಳಲಾಗಿದೆ. ಆದರೆ ಇದು ಬಿಜೆಪಿಗೆ ಕಾಣುವುದಿಲ್ಲ" ಎಂದು ತಿಳಿಸಿದರು.
ಇನ್ನೂ ಬೆಂಗಳೂರಿನಲ್ಲಿ ಗುಂಡಿ ಬಿದ್ದ ವಿಚಾರವಾಗಿ ಡಿಕೆಶಿ ಅವರಿಗೆ ಕೇಳಿ ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, "ಸಹಜವಾಗಿ ಹಳೆಯ ರಸ್ತೆಯಲ್ಲಿ ಗುಂಡಿ ಬಿದ್ದಿರುತ್ತೆ. ಆ ಗುಂಡಿ ಮುಚ್ಚುವ ಕಾರ್ಯ ಮಾಡಬೇಕಿರುವದು ಸ್ಥಳೀಯ ಸಂಸ್ಥೆ ಹಾಗೂ ರಾಜ್ಯ ಸರ್ಕಾರದವರು ಮಾಡಬೇಕು. ಡಿಕೆಶಿ ಅವರ ಹೆಸರು ಹೇಳಲು ಕಾರಣ ಅವರು ಸಂಬಂಧ ಪಟ್ಟ ಮಂತ್ರಿಗಳು ಎಂಬ ಕಾರಣಕ್ಕೆ ಹೇಳಿದ್ದಾರೆ" ಎಂದು ಸಿಎಂ ಹೇಳಿಕೆಯನ್ನು ಸಮರ್ಥನೆ ಮಾಡಿಕೊಂಡರು.
"ಈ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಈ ವಿಚಾರ ಕೋರ್ಟ್ ಮಾನಿಟರಿಂಗ್ ಮಾಡುತ್ತಿತ್ತು. ಎರಡು ವರ್ಷಗಳ ಕಾಲ ಕೋರ್ಟ್ ಮಾನಿಟರ್ ಮಾಡಿತ್ತು. ನಾವಂತೂ ಕೋರ್ಟ್ ಹತ್ತಿರ ಹೇಳಿಸಿಕೊಂಡಿಲ್ಲ. ಈಗ ವಿಪರೀತ ಮಳೆಯಾಗಿದೆ, ಹೀಗಾಗಿ ಗುಂಡಿ ಬಿದ್ದಿದೆ" ಎಂದು ಹೇಳಿದರು.