ಬೆಂಗಳೂರು, ಫೆ. 25 (DaijiworldNews/AK): ಖಾಲಿ ಹುದ್ದೆ ಭರ್ತಿಗಾಗಿ ವೈದ್ಯರಿಂದ ಮತ್ತು ಧಾರವಾಡದಲ್ಲಿ ವಿದ್ಯಾರ್ಥಿಗಳಿಂದ ಪ್ರತಿಭಟನೆ ಸೇರಿದಂತೆ ಹಲವು ಹೋರಾಟಗಳನ್ನು ಕೇಂದ್ರವಾಗಿಸಿಕೊಂಡು ಕಾಂಗ್ರೆಸ್ ಆಡಳಿತದ ವಿರುದ್ಧ ವಿಪಕ್ಷ ನಾಯಕ ಆರ್. ಅಶೋಕ್ ಕಿಡಿಕಾರಿದ್ದಾರೆ.

ತಮ್ಮ ಎಕ್ಸ್ ಖಾತೆಯಲ್ಲಿ ಫೋಸ್ಟ್ ಮಾಡಿರುವ ಅವರು , ಧಾರವಾಡದಲ್ಲಿ ಹಲವು ಬಾರಿ ಸರ್ಕಾರಿ ಉದ್ಯೋಗಾಕಾಂಕ್ಷಿಗಳ ಪ್ರತಿಭಟನೆ ನಡೆದಿದ್ದು, ಖಾಲಿ ಹುದ್ದೆ ಭರ್ತಿಗಾಗಿ ರಾಜ್ಯ ಸರ್ಕಾರಿ ವೈದ್ಯರ OPD ಬಂದ್, ಪರಿಶಿಷ್ಟ ಜಾತಿ ಸಮುದಾಯಗಳು ಹಾಗೂ ಎಸ್ಸಿ ಬಲಗೈ ಸಮುದಾಯಗಳ ಪ್ರತಿಭಟನೆ ಸೇರಿದಂತೆ ಮುಂದೆ ನಡೆಯಬೇಕಿರುವ ಹೋರಾಟಗಳ ಪಟ್ಟಿಯನ್ನೇ ಉಲ್ಲೇಖಿಸಿರುವ ಅಶೋಕ್, ನಿಮ್ಮ ಭ್ರಷ್ಟ ಆಡಳಿತದಲ್ಲಿ ಒಬ್ಬರಾದರೂ ನೆಮ್ಮದಿಯಿಂದ ಇದ್ದಾರಾ? ಎಂದು ಸಿಎಂ ಸಿದ್ದರಾಮಯ್ಯಗೆ ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ಆಡಳಿತವು ಭ್ರಷ್ಟತೆ ಮತ್ತು ಅರಾಜಕತೆಯಿಂದ ಕೂಡಿದೆ, ಸರ್ಕಾರದ ಖಜಾನೆ ಖಾಲಿಯಾಗಿರುವುದಕ್ಕೆ ಈ ಹೋರಾಟಗಳಿಗಿಂತ ಬೇರೆ ಸಾಕ್ಷಿ ಬೇಕೆ? ಎಂದು ಪ್ರಶ್ನಿಸಿದ್ದಾರೆ. ಅವರ ಟ್ವೀಟ್ನಲ್ಲಿ ರಾಜ್ಯದ ಪ್ರತಿ ಹಂತದಲ್ಲಿ ಜನರ ಆಕ್ರೋಶ ಹೆಚ್ಚುತ್ತಿರುವುದನ್ನು, ಸರ್ಕಾರವು ಜನರ ಬೇಡಿಕೆಗಳಿಗೆ ಸ್ಪಂದಿಸುವ ಅಗತ್ಯವಿರುವುದನ್ನು ಹೇಳಿದ್ದಾರೆ.