ನವದೆಹಲಿ, ಮಾ. 01 (DaijiworldNews/TA): ಪ್ರತಿ ವರ್ಷ ಲಕ್ಷಾಂತರ ವಿದ್ಯಾರ್ಥಿಗಳು ದೇಶದ ಅತ್ಯಂತ ಕಠಿಣ ಪರೀಕ್ಷೆಗಳಲ್ಲೊಂದು ಆಗಿರುವ ನಾಗರಿಕ ಸೇವಾ ಪರೀಕ್ಷೆಯನ್ನು ಬರೆಯುತ್ತಾರೆ. ಆದರೆ ಕೆಲವೇ ಮಂದಿ ಯಶಸ್ಸಿನ ಮೆಟ್ಟಿಲೇರಲು ಸಾಧ್ಯವಾಗುತ್ತದೆ. ಅಂತಹ ಸಾಧಕರಲ್ಲಿ ಒಬ್ಬರು ಗೋವಿಂದ್ ಜೈಸ್ವಾಲ್. ಕೇವಲ 22 ವರ್ಷ ವಯಸ್ಸಿನಲ್ಲಿ ಮೊದಲ ಪ್ರಯತ್ನದಲ್ಲೇ ಉತ್ತೀರ್ಣರಾಗಿ ಅಖಿಲ ಭಾರತ ಮಟ್ಟದಲ್ಲಿ 48ನೇ ಶ್ರೇಯಾಂಕ ಪಡೆದ ಅವರು ಅನೇಕ ಯುವಕರಿಗೆ ಸ್ಫೂರ್ತಿಯಾಗಿದ್ದಾರೆ.

ವಾರಣಾಸಿಯಲ್ಲಿ ಆರ್ಥಿಕ ಸಂಕಷ್ಟದಲ್ಲಿ ಬೆಳೆದ ಗೋವಿಂದ್ ಜೈಸ್ವಾಲ್ ಅವರ ಜೀವನ ಹೋರಾಟಗಳಿಂದ ಕೂಡಿತ್ತು. ಅವರ ತಂದೆ ನಾರಾಯಣ ಜೈಸ್ವಾಲ್ ರಿಕ್ಷಾ ವ್ಯವಹಾರ ನಡೆಸುತ್ತಿದ್ದರು. ಕುಟುಂಬದ ಆರ್ಥಿಕ ಪರಿಸ್ಥಿತಿ ದುರ್ಬಲವಾಗಿದ್ದರೂ, ಮಗನ ಶಿಕ್ಷಣದ ವಿಷಯದಲ್ಲಿ ಎಂದಿಗೂ ಹಿಂಜರಿಯಲಿಲ್ಲ. 1995ರಲ್ಲಿ ತಾಯಿ ನಿಧನರಾದುದು ಕುಟುಂಬಕ್ಕೆ ದೊಡ್ಡ ಆಘಾತವಾಯಿತು. ಅವರ ಚಿಕಿತ್ಸೆಗೆ ತಂದೆಯ 35 ರಿಕ್ಷಾಗಳಲ್ಲಿ 20ನ್ನು ಮಾರಬೇಕಾಯಿತು. ಆದರೆ ಅವರನ್ನು ಉಳಿಸಲು ಸಾಧ್ಯವಾಗಲಿಲ್ಲ. ಈ ಘಟನೆ ಕುಟುಂಬದ ಮೇಲೆ ಹೆಚ್ಚಿನ ಹೊಣೆಗಾರಿಕೆಯನ್ನು ತಂದಿತು.
ನಾಗರಿಕ ಸೇವಾ ಪರೀಕ್ಷೆಗೆ ತಯಾರಿ ಮಾಡಲು ದೆಹಲಿಗೆ ಹೋಗಬೇಕೆಂದಾಗ ಹಣದ ಕೊರತೆ ಎದುರಾಯಿತು. ಮಗನ ಕನಸನ್ನು ನನಸಾಗಿಸಲು ತಂದೆ ಉಳಿದ 14 ರಿಕ್ಷಾಗಳನ್ನೂ ಮಾರಿಬಿಟ್ಟು, ಒಂದನ್ನು ಮಾತ್ರ ಉಳಿಸಿಕೊಂಡು ಸ್ವತಃ ರಿಕ್ಷಾ ಓಡಿಸಲು ಪ್ರಾರಂಭಿಸಿದರು. ಒಂದು ಕಾಲದಲ್ಲಿ ಹಲವಾರು ರಿಕ್ಷಾಗಳ ಮಾಲೀಕರಾಗಿದ್ದವರು ಮಗನ ವಿದ್ಯಾಭ್ಯಾಸಕ್ಕಾಗಿ ರಿಕ್ಷಾ ಚಾಲಕರಾದರು.
ಗೋವಿಂದ್ ಜೈಸ್ವಾಲ್ ವಾರಣಾಸಿಯ ಸರ್ಕಾರಿ ಪದವಿ ಕಾಲೇಜಿನಲ್ಲಿ ಗಣಿತಶಾಸ್ತ್ರದಲ್ಲಿ ಪದವಿ ಪೂರ್ಣಗೊಳಿಸಿದರು. ಅನೇಕ ಸವಾಲುಗಳ ನಡುವೆಯೂ ತಮ್ಮ ಅಧ್ಯಯನವನ್ನು ನಿಲ್ಲಿಸದೆ ಮುಂದುವರೆಸಿ, 2006ರಲ್ಲಿ ಮೊದಲ ಪ್ರಯತ್ನದಲ್ಲೇ ನಾಗರಿಕ ಸೇವಾ ಪರೀಕ್ಷೆಯಲ್ಲಿ ಉತ್ತೀರ್ಣರಾದರು. ಅವರು ನಾಗಾಲ್ಯಾಂಡ್ನಲ್ಲಿ ಸಹಾಯಕ ಆಯುಕ್ತರಾಗಿ, ಗೋವಾದಲ್ಲಿ ಕ್ರೀಡಾ ಕಾರ್ಯನಿರ್ವಾಹಕ ನಿರ್ದೇಶಕರಾಗಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದಲ್ಲಿ ಉಪ ಕಾರ್ಯದರ್ಶಿಯಾಗಿ ಹಾಗೂ ಶಿಕ್ಷಣ ಸಚಿವಾಲಯದ ಉನ್ನತ ಶಿಕ್ಷಣ ಇಲಾಖೆಯಲ್ಲಿ ಜಂಟಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ. ಗೋವಿಂದ್ ಜೈಸ್ವಾಲ್ ಅವರ ಕಥೆ ಕಠಿಣ ಪರಿಶ್ರಮ, ತ್ಯಾಗ ಮತ್ತು ದೃಢಸಂಕಲ್ಪ ಇದ್ದರೆ ಯಾವುದೇ ಅಡೆತಡೆಗೂ ಮಣಿಯಬೇಕಾಗಿಲ್ಲ ಎಂಬುದಕ್ಕೆ ಜೀವಂತ ಉದಾಹರಣೆ.