ತೆಲಂಗಾಣ, ಮಾ. 03 (DaijiworldNews/AA): ಯುಪಿಎಸ್ಸಿ ಪರೀಕ್ಷೆಯು ಭಾರತದ ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ ಒಂದಾಗಿದ್ದು, ಈ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದು ಕಷ್ಟಸಾಧ್ಯ. ಈ ಪರೀಕ್ಷೆಯನ್ನು ಬರೆಯುವ ಕೆಲ ಅಭ್ಯರ್ಥಿಗಳು ಕೇವಲ ಮೊದಲ ಪ್ರಯತ್ನದಲ್ಲೇ ಉತ್ತೀರ್ಣರಾಗುತ್ತಾರೆ. ಆದರೆ ಇನ್ನು ಕೆಲ ಅಭ್ಯರ್ಥಿಗಳು ಹಲವಾರು ಪ್ರಯತ್ನಗಳ ಬಳಿಕ ಉತ್ತೀರ್ಣರಾಗುವಲ್ಲಿ ಸಫಲರಾಗುತ್ತಾರೆ. ಹೀಗೆ ತಮ್ಮ ಆರನೇ ಪ್ರಯತ್ನದಲ್ಲಿ 68ನೇ ರ್ಯಾಂಕ್ ಪಡೆದು ಐಎಎಸ್ ಅಧಿಕಾರಿಯಾದ ಸಾಯಿ ಚೈತನ್ಯ ಜಾಧವ್ ಅವರ ಯಶೋಗಾಥೆ ಇದು.

ಸಾಯಿ ಚೈತನ್ಯ ಜಾಧವ್ ಅವರು ಆದಿಲಾಬಾದ್ ಜಿಲ್ಲೆಯ ತಲಮಡುಗು ಮಂಡಲದ ಪಲ್ಸಿ (ಬಿ) ತಾಂಡಾ ಎಂಬ ಪುಟ್ಟ ಬುಡಕಟ್ಟು ಹಳ್ಳಿಯವರು. ಅವರ ತಂದೆ ಹೆಡ್ ಕಾನ್ಸ್ಟೇಬಲ್ ಆಗಿ ಸೇವೆ ಸಲ್ಲಿಸುತ್ತಿದ್ದರು.
ಕಾಗಜನಗರದ ಜವಾಹರ್ ನವೋದಯ ವಿದ್ಯಾಲಯದ (ಜೆಎನ್ವಿ) ಹಳೆ ವಿದ್ಯಾರ್ಥಿಯಾದ ಸಾಯಿ ಚೈತನ್ಯ, ತಿರುಚಿರಾಪಳ್ಳಿಯ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಇನ್ಫರ್ಮೇಷನ್ ಟೆಕ್ನಾಲಜಿಯಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪೂರ್ಣಗೊಳಿಸಿದ್ದರು. ಶಾಲಾ ದಿನಗಳಲ್ಲಿ ತಮ್ಮ ಶಾಲೆಗೆ ಭೇಟಿ ನೀಡುತ್ತಿದ್ದ ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳೊಂದಿಗಿನ ಸಂವಾದದಿಂದ ಪ್ರೇರಿತರಾದ ಅವರು, ಅಂದೇ ಯುಪಿಎಸ್ಸಿ ಬರೆಯುವ ದೃಢ ಸಂಕಲ್ಪ ಮಾಡಿದ್ದರು.
ಸಾಯಿ ಚೈತನ್ಯ ಜಾಧವ್ ಅವರ ಈ ಯಶಸ್ಸಿನ ಹಾದಿ ಅಷ್ಟು ಸುಲಭವಾಗಿರಲಿಲ್ಲ. ಮೊದಲ ನಾಲ್ಕು ಪ್ರಯತ್ನಗಳಲ್ಲಿ ಅವರು ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಸಾಧ್ಯವಾಗಲಿಲ್ಲ. ಐದನೇ ಪ್ರಯತ್ನದಲ್ಲಿ, ಐಎಎಸ್ ಅಧಿಕಾರಿಯಾಗುವ ಅವಕಾಶವನ್ನ ಸ್ವಲ್ಪದರಲ್ಲೇ ಕೈತಪ್ಪಿಸಿಕೊಂಡ ಅವರು ಐಎಫ್ಎಸ್ ಅಧಿಕಾರಿಯಾಗಿ ಆಯ್ಕೆಯಾದರು.
ಆದರೆ ಅಷ್ಟಕ್ಕೆ ತಮ್ಮ ಪ್ರಯತ್ನವನ್ನು ನಿಲ್ಲಿಸದ ಅವರು, ಆರನೇ ಬಾರಿಗೆ ಯುಪಿಇಎಸ್ಸಿ ಪರೀಕ್ಷೆ ಬರೆದು 68ನೇ ರ್ಯಾಂಕ್ ಪಡೆಯುವ ಮೂಲಕ ಐಎಎಸ್ ಅಧಿಕಾರಿಯಾಗುವ ತಮ್ಮ ಕನಸನ್ನು ನನಸಾಗಿಸಿಕೊಂಡರು. ಈ ಮೂಲಕ ಅನೇಕ ಯುಪಿಎಸ್ಸಿ ಅಭ್ಯರ್ಥಿಗಳಿಗೆ ಮಾದರಿಯಾಗಿದ್ದಾರೆ.