ಚಿಕ್ಕಮಗಳೂರು, ಮಾ. 03 (DaijiworldNews/TA): ಕಾಫಿನಾಡಿನ ಹೃದಯಭಾಗದಲ್ಲಿರುವ ಜೂನಿಯರ್ ಕಾಲೇಜು ಸಮೀಪ ಇಂದು ಮಧ್ಯಾಹ್ನ ಕೆಎಸ್ಆರ್ಟಿಸಿ ಬಸ್ ಸಂಚರಿಸುತ್ತಿದ್ದಾಗಲೇ ಇಂಜಿನ್ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡು ಆತಂಕದ ವಾತಾವರಣ ನಿರ್ಮಾಣವಾಯಿತು. ಅದೃಷ್ಟವಶಾತ್ ಬಸ್ಸಿನಲ್ಲಿದ್ದ ಎಲ್ಲಾ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗೆ ಸೇರಿದ ಚಿಕ್ಕಮಗಳೂರು ಡಿಪೋ ಬಸ್ ಜಿಲ್ಲಾ ಕೇಂದ್ರದಿಂದ ಹಾಸನ ಕಡೆಗೆ ತೆರಳುತ್ತಿತ್ತು ಎಂದು ತಿಳಿದುಬಂದಿದೆ. ಬಸ್ ನಿಲ್ದಾಣದಿಂದ ಹೊರಟು ಜೂನಿಯರ್ ಕಾಲೇಜು ಬಳಿ ತಲುಪುತ್ತಿದ್ದಂತೆ ಇಂಜಿನ್ ಭಾಗದಲ್ಲಿ ದಟ್ಟ ಹೊಗೆ ಮತ್ತು ಬೆಂಕಿ ಕಾಣಿಸಿಕೊಂಡಿತು.
ಬೆಂಕಿಯ ಸುಳಿವು ಸಿಗುತ್ತಿದ್ದಂತೆ ಚಾಲಕ ತಕ್ಷಣ ಎಚ್ಚರಿಕೆ ತೋರಿಸಿ ಬಸ್ಸನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿ, ಪ್ರಯಾಣಿಕರೆಲ್ಲರನ್ನು ತಕ್ಷಣ ಕೆಳಗಿಳಿಯುವಂತೆ ಸೂಚಿಸಿದರು. ಪರಿಣಾಮ ಬಸ್ಸಿನಲ್ಲಿದ್ದ ಹತ್ತಾರು ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ತಕ್ಷಣ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಂದಿಸಿದರು. ಆದರೆ ಬೆಂಕಿಯಿಂದ ಬಸ್ಸಿನ ಮುಂಭಾಗ ಭಾಗಶಃ ಹಾನಿಗೊಳಗಾಗಿದೆ.