ಬೆಂಗಳೂರು, ಮಾ. 21 (DaijiworldNews/AA): ದಾವಣಗೆರೆ ದಕ್ಷಿಣ, ಬಾಗಲಕೋಟೆ ಕ್ಷೇತ್ರಗಳ ಉಪಚುನಾವಣೆಗೆ ಕಾಂಗ್ರೆಸ್ ಟಿಕೆಟ್ ಇಂದು ಸಂಜೆ ಅಥವಾ ನಾಳೆ ಬೆಳಗ್ಗೆ ಒಳಗೆ ಘೋಷಣೆ ಮಾಡುತ್ತೇವೆ ಅಂತಾ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಮಾಹಿತಿ ನೀಡಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, "ಟಿಕೆಟ್ ವಿಚಾರವಾಗಿ ವ್ಯಾಪಕವಾಗಿ ಚರ್ಚೆ ಮಾಡಲಾಗಿದೆ. ಯಾವುದೇ ಒಬ್ಬ ಕಾರ್ಯಕರ್ತರ ಅಪಸ್ವರ ಇದ್ದರೂ ಕೂಡ ಪರಿಗಣನೆಗೆ ತೆಗೆದುಕೊಂಡಿದ್ದೇವೆ. ಶುಕ್ರವಾರ ತಡರಾತ್ರಿಯವರೆಗೆ ಟಿಕೆಟ್ ವಿಚಾರವಾಗಿ ಚರ್ಚೆ ಮಾಡಿದ್ದೇವೆ. ಎಲ್ಲರ ಅಭಿಪ್ರಾಯಗಳನ್ನ ಕೇಳಿದ್ದೇವೆ" ಎಂದು ಹೇಳಿದರು.
ಈ ವೇಳೆ ಮಾತನಾಡಿದ ರಾಜ್ಯಸಭಾ ಸದಸ್ಯ ನಾಸೀರ್ ಹುಸೇನ್, "ಯರ್ಯಾರು ಆಕಾಂಕ್ಷಿಗಳು ಇದ್ದಾರೆ ಎಲ್ಲರೂ ಹೋಗಿ ಸಿಎಂ, ಡಿಸಿಎಂ, ಸುರ್ಜೇವಾಲಾ, ಖರ್ಗೆ ಭೇಟಿ ಆಗಿದ್ದಾರೆ, ಕೇಳಿದ್ದಾರೆ. ನಮ್ಮ ವೀಕ್ಷಕರು ಹೋಗಿದ್ದಾರೆ, ಸರ್ವೇ ಮಾಡಿದ್ದಾರೆ. ಎಲ್ಲರೂ ಉಸ್ತುವಾರಿಗಳಿಗೆ ವರದಿ ಸಲ್ಲಿಸಿದ್ದಾರೆ. ಅವರು ಹೈಕಮಾಂಡ್ಗೆ ವರದಿ ಸಲ್ಲಿಸಿರಬಹುದು. ಎಲ್ಲಾ ಸಮುದಾಯದವರು ಹೋಗಿ ಮನವಿ ಮಾಡಿದ್ದಾರೆ, ಲಾಬಿ ಮಾಡಿದ್ದಾರೆ. ಅದನ್ನ ಸರ್ವೇ ಮಾಡಿ ವರದಿ ಸಲ್ಲಿಸಿದ್ದಾರೆ. ಎರಡೂ ಕಡೆ ನಾವು ಗೆಲ್ಲಬೇಕು, ಅಂತಾ ಅಭ್ಯರ್ಥಿಯನ್ನೇ ಆಯ್ಕೆ ಮಾಡಬೇಕು" ಎಂದರು.