ತಿರುವನಂತಪುರಂ, ಮಾ. 21 (DaijiworldNews/AA): ವೈದ್ಯೆಯನ್ನು 27 ಬಾರಿ ಇರಿದು ಬರ್ಬರವಾಗಿ ಹತ್ಯೆ ಮಾಡಿದ್ದ ಅಪರಾಧಿಗೆ ಕೊಲ್ಲಂ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಭಾರತೀಯ ದಂಡ ಸಂಹಿತೆ ಅಡಿಯಲ್ಲಿ ಶನಿವಾರ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದೆ.

ಅಪರಾಧಿ ಜಿ. ಸಂದೀಪ್ಗೆ 30 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಅಪರಾಧಿಯ ಈ ಜೈಲು ಶಿಕ್ಷೆಯ ಅವಧಿ ಮುಗಿದ ಬಳಿಕ ಜೀವಾವಧಿ ಶಿಕ್ಷೆ ಆರಂಭವಾಗುತ್ತದೆ.
ನ್ಯಾಯಾಲಯ ಈ ಪ್ರಕರಣವನ್ನು ಅಪರೂಪವೆಂದು ಪರಿಗಣಿಸದೇ ಮರಣದಂಡನೆ ವಿಧಿಸಿಲ್ಲ. ಹೀಗಾಗಿ ಸದ್ಯ ಪ್ರತಾಪ್ ಜಿ ಅವರು ಅಪರಾಧಿಗೆ ಜೀವಾವಧಿ ಶಿಕ್ಷೆಯನ್ನು ಮರಣದಂಡನೆಗೆ ಹೆಚ್ಚಿಸುವಂತೆ ಕೋರಿ ಮೇಲ್ಮನವಿ ಸಲ್ಲಿಸುವುದಾಗಿ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಪ್ರತಾಪ್ ಜಿ ಪಡಿಕ್ಕಲ್ ತಿಳಿಸಿದ್ದಾರೆ.
ಪ್ರಕರಣದ ಹಿನ್ನೆಲೆ:
ವೃತ್ತಿಯಲ್ಲಿ ಶಾಲಾ ಶಿಕ್ಷಕನಾಗಿದ್ದ ಸಂದೀಪ್ನನ್ನು 2023ರ ಮೇ 10ರಂದು ಪೊಲೀಸರು ವೈದ್ಯಕೀಯ ಚಿಕಿತ್ಸೆಗಾಗಿ ತಾಲೂಕು ಆಸ್ಪತ್ರೆಗೆ ಕರೆ ತಂದಿದ್ದರು. ಈ ವೇಳೆ ಗಾಯವಾಗಿದ್ದ ಕಾಲಿಗೆ ವೈದ್ಯೆ ವಂದನಾ ಬ್ಯಾಂಡೇಜ್ ಹಾಕುತ್ತಿದ್ದರು. ಇದೇ ಸಮಯಕ್ಕೆ ಅಲ್ಲೇ ಇದ್ದ ಶಸ್ತ್ರಚಿಕಿತ್ಸಾ ಕತ್ತರಿಯಿಂದ ಸಂದೀಪ್ ಏಕಾಏಕಿ ಅಲ್ಲಿದ್ದ ಕೆಲವರ ಮೇಲೆ ಹಲ್ಲೆ ಮಾಡಿ, ಬಳಿಕ ವಂದನಾ ಮೇಲೆ 27 ಬಾರಿ ಇರಿದು, ಹಲ್ಲೆ ನಡೆಸಿದ್ದ.
ಕೂಡಲೇ ವೈದ್ಯೆ ವಂದನಾರನ್ನು ತಿರುವನಂತಪುರಂನ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ಕೂಡ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದರು. ವಂದನಾ ಮೂಲತಃ ಕೊಟ್ಟಾಯಂ ಜಿಲ್ಲೆಯ ಕಾಡುತುರುತಿಯದವರು. ಅಜೀಜಿಯಾ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸಕಿಯಾಗಿದ್ದರು ಮತ್ತು ತರಬೇತಿಯ ಭಾಗವಾಗಿ ಕೊಟ್ಟಾರಕ್ಕರ ತಾಲೂಕು ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು.