ಒಡಿಶಾ, ಮಾ. 21 (DaijiworldNews/TA): ಇತ್ತೀಚೆಗೆ ನಡೆದ ರಾಜ್ಯಸಭಾ ಚುನಾವಣೆ ವೇಳೆ ಪಕ್ಷದ ನಿಯಮಗಳನ್ನು ಉಲ್ಲಂಘಿಸಿದ ಆರೋಪದಲ್ಲಿ ಬಿಜು ಜನತಾ ದಳ (ಬಿಜೆಡಿ) ತನ್ನ 6 ಶಾಸಕರನ್ನು ಅಮಾನತುಗೊಳಿಸಿದೆ.

ಅಡ್ಡ ಮತದಾನದಲ್ಲಿ ತೊಡಗಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದ್ದು, ಶೋಕಾಸ್ ನೋಟಿಸ್ಗೆ ಶಾಸಕರು ನೀಡಿದ ಉತ್ತರಗಳ ಪರಿಶೀಲನೆ ಹಾಗೂ ಪಕ್ಷದ ಶಿಸ್ತು ಸಮಿತಿಯ ಸಂಪೂರ್ಣ ಪರಿಶೀಲನೆಯ ಬಳಿಕ ಅಂತಿಮ ತೀರ್ಮಾನ ಕೈಗೊಳ್ಳಲಾಗಿದೆ.
ರಾಜ್ಯಸಭಾ ಚುನಾವಣೆಯಲ್ಲಿ ಗಮನಾರ್ಹ ಅಡ್ಡ ಮತದಾನ ಕಂಡುಬಂದಿದ್ದು, ಬಿಜೆಡಿ, ಕಾಂಗ್ರೆಸ್ ಮತ್ತು ಎಡಪಕ್ಷಗಳ ಜಂಟಿ ಅಭ್ಯರ್ಥಿ ದತ್ತೇಶ್ವರ ಹೋಟಾ ಬದಲಾಗಿ ಬಿಜೆಪಿ ಬೆಂಬಲಿತ ಸ್ವತಂತ್ರ ಅಭ್ಯರ್ಥಿ ದಿಲೀಪ್ ರೇ ಅವರಿಗೆ ಕೆಲವು ಶಾಸಕರು ಮತ ಚಲಾಯಿಸಿದ್ದಾರೆ. ಇದರಿಂದ ದಿಲೀಪ್ ರೇ ಅವರ ಗೆಲುವು ಸಾಧ್ಯವಾಯಿತು. ಈ ಪರಿಣಾಮವಾಗಿ ಬಿಜೆಪಿ 2 ಸ್ಥಾನಗಳನ್ನು ಪಡೆದರೆ, ಬಿಜೆಡಿ 1 ಸ್ಥಾನ ಪಡೆದಿದೆ. ಜೊತೆಗೆ ಬಿಜೆಪಿ ಬೆಂಬಲಿತ ಸ್ವತಂತ್ರ ಅಭ್ಯರ್ಥಿಗೆ ಮತ್ತೊಂದು ಸ್ಥಾನ ಸಿಕ್ಕಿದೆ.
ಈಗಾಗಲೇ ಮಾರ್ಚ್ 17ರಂದು 6 ಶಾಸಕರಿಗೆ ಪಕ್ಷದ ವಿಪ್ ಉಲ್ಲಂಘನೆ ಕುರಿತು ವಿವರಣೆ ಕೇಳಿ ನೋಟಿಸ್ ನೀಡಲಾಗಿತ್ತು. ಇದೀಗ ಅವರನ್ನು ಅಧಿಕೃತವಾಗಿ ಅಮಾನತುಗೊಳಿಸಲಾಗಿದೆ.
ಅಮಾನತುಗೊಂಡ ಶಾಸಕರು:
ಬಲಿಗುಡದ ಶಾಸಕ ಚಕ್ರಮಣಿ ಕನ್ಹಾರ್
ಜಯದೇವ್ನ ಶಾಸಕ ನಬಾ ಕಿಶೋರ್ ಮಲ್ಲಿಕ್
ಚೌದ್ವಾರ-ಕಟಕ್ನ ಶಾಸಕ ಸೌವಿಕ್ ಬಿಸ್ವಾಲ್
ಬಸ್ತಾದ ಶಾಸಕ ಸುಬಾಸಿನಿ ಜೆನಾ
ತಿರ್ಟೋಲ್ನ ಶಾಸಕ ರಮಾಕಾಂತ ಭೋಯ್
ಬಂಕಿಯ ಶಾಸಕ ದೇವಿ ರಂಜನ್ ತ್ರಿಪಾಠಿ
ಈ ಶಾಸಕರು ಪಕ್ಷದ ಮೂಲ ತತ್ವಗಳು ಮತ್ತು ವಿಪ್ ಅನ್ನು ಉಲ್ಲಂಘಿಸಿದ್ದಾರೆ ಎಂದು ಬಿಜೆಡಿ ತನ್ನ ಆದೇಶದಲ್ಲಿ ಸ್ಪಷ್ಟಪಡಿಸಿದೆ. ಮಾರ್ಚ್ 16ರಂದು ನಡೆದ ಮತದಾನದಲ್ಲಿ ಶಿಸ್ತುಭಂಗ ನಡೆದಿರುವುದಾಗಿ ಪಕ್ಷ ತಿಳಿಸಿದೆ.