ಬೆಂಗಳೂರು, ಮಾ. 29 (DaijiworldNews/TA): ಗಲ್ಫ್ ಪ್ರದೇಶದ ಯುದ್ಧ ಪರಿಣಾಮ ದೇಶದಾದ್ಯಂತ ಕಂಡುಬರುತ್ತಿದ್ದು, ಕರುನಾಡಲ್ಲೂ ಅಡುಗೆ ಅನಿಲದ ಅಭಾವ ಗಂಭೀರವಾಗುತ್ತಿದೆ. ವಾಣಿಜ್ಯ ಎಲ್ಪಿಜಿ ಸಿಲಿಂಡರ್ಗಳ ಕೊರತೆಯಿಂದ ಹೋಟೆಲ್ಗಳು, ಕೈಗಾರಿಕೆಗಳು ಸಂಕಷ್ಟಕ್ಕೆ ಸಿಲುಕಿವೆ. ಜನರು ಖಾಲಿ ಸಿಲಿಂಡರ್ ಹಿಡಿದು ಅನಿಲ ಏಜೆನ್ಸಿಗಳತ್ತ ಧಾವಿಸುತ್ತಿರುವ ದೃಶ್ಯಗಳು ಸಾಮಾನ್ಯವಾಗಿವೆ. ಈ ಪರಿಸ್ಥಿತಿಯಲ್ಲಿ ಮಾತನಾಡಿದ ಆಹಾರ ಸಚಿವ ಕೆ. ಎಚ್. ಮುನಿಯಪ್ಪ, ಸಿಲಿಂಡರ್ ಕೊರತೆಯ ಹಿನ್ನೆಲೆ ಗ್ರಾಮೀಣ ಪ್ರದೇಶದ ಜನರು ತಾತ್ಕಾಲಿಕವಾಗಿ ಸೌದೆ ಒಲೆಗಳನ್ನು ಬಳಸುವಂತೆ ಮನವಿ ಮಾಡಿದ್ದಾರೆ.

ಬೆಂಗಳೂರಿನಿಂದ ಸುಮಾರು 40 ಕಿಮೀ ದೂರ ಹೋದರೆ ಸೌದೆ ಲಭ್ಯವಿದ್ದು, ಅರಣ್ಯ ಪ್ರದೇಶದ ಹಸಿ ಮರಗಳನ್ನು ಕಡಿದು ಬಳಸಬಾರದು, ಬದಲಿಗೆ ಒಣ ಕಟ್ಟಿಗೆಗಳನ್ನು ಮಾತ್ರ ಬಳಸಬೇಕು ಎಂದು ತಿಳಿಸಿದ್ದಾರೆ. ರಾಜ್ಯದಲ್ಲಿ ಉಂಟಾದ ಸಿಲಿಂಡರ್ ಕೊರತೆಗೆ ಕೇಂದ್ರ ಸರ್ಕಾರವೇ ಕಾರಣವೆಂದು ಆರೋಪಿಸಿದ ಅವರು, ಡಿಸ್ಟ್ರಿಬ್ಯೂಟರ್ಗಳ ವಿರುದ್ಧ ದೂರುಗಳು ಬರುತ್ತಿವೆ ಎಂದರು. ಗೃಹ ಬಳಕೆಯ ಸಿಲಿಂಡರ್ಗಳ ಪೂರೈಕೆ ಹಿಂದಿನಂತೆ ಮುಂದುವರಿಯಲಿದೆ ಎಂದು ಭರವಸೆ ನೀಡಿದ್ದಾರೆ. ಈಗಾಗಲೇ ಆಯಿಲ್ ಕಂಪನಿಗಳಿಗೆ ಅಗತ್ಯ ಸೂಚನೆ ನೀಡಲಾಗಿದ್ದು, ಗ್ರಾಹಕರ ಮನೆ ಬಾಗಿಲಿಗೆ ಸಕಾಲದಲ್ಲಿ ಸಿಲಿಂಡರ್ ತಲುಪಿಸಬೇಕು ಎಂದು ತಿಳಿಸಿದ್ದಾರೆ. ಪ್ರಸ್ತುತ ರಾಜ್ಯಕ್ಕೆ ಸುಮಾರು 40% ಸಿಲಿಂಡರ್ ಪೂರೈಕೆ ಆಗುತ್ತಿದೆ ಎಂದು ಹೇಳಿದರು.
ಇಂದಿನಿಂದಲೇ ವಾಣಿಜ್ಯ ಎಲ್ಪಿಜಿ ಸಿಲಿಂಡರ್ ವಿತರಣೆಯನ್ನು ಹೆಚ್ಚಿಸಲಾಗಿದ್ದು, ಪೂರೈಕೆಯನ್ನು 68%ಕ್ಕೆ ಏರಿಸಲಾಗಿದೆ. ಶಿಕ್ಷಣ ಸಂಸ್ಥೆಗಳು, ವಸತಿ ನಿಲಯಗಳು, ಆಸ್ಪತ್ರೆಗಳು ಸೇರಿದಂತೆ ಅಗತ್ಯ ಸೇವೆಗಳಿಗಾಗಿ ಸಾವಿರಾರು ಸಿಲಿಂಡರ್ಗಳನ್ನು ಹಂಚಿಕೆ ಮಾಡಲಾಗಿದೆ. ಹೋಟೆಲ್, ಡಾಬಾ, ರೆಸ್ಟೋರೆಂಟ್, ಕ್ಯಾಂಟೀನ್, ಬೇಕರಿ ಹಾಗೂ ಇತರೆ ವಾಣಿಜ್ಯ ಬಳಕೆಗಳಿಗೆ ದೊಡ್ಡ ಪ್ರಮಾಣದಲ್ಲಿ ಸಿಲಿಂಡರ್ ವಿತರಣೆ ನಡೆಯುತ್ತಿದೆ.
ಇದೇ ವೇಳೆ, ಹೆಚ್ಚುವರಿ ದರಕ್ಕೆ ಸಿಲಿಂಡರ್ ಮಾರಾಟ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಎಚ್ಚರಿಕೆ ನೀಡಿದ್ದಾರೆ. ಸರ್ಕಾರ ನಿಗದಿಪಡಿಸಿದ ದರಕ್ಕಿಂತ ಹೆಚ್ಚು ವಸೂಲಿ ಮಾಡಿದರೆ ಪರವಾನಗಿ ರದ್ದು ಮಾಡುವುದಾಗಿ ತಿಳಿಸಿದ್ದಾರೆ. ಈಗಾಗಲೇ ಅನಧಿಕೃತ ದಾಸ್ತಾನು ಪ್ರಕರಣಗಳಲ್ಲಿ 1169 ಕೇಸ್ ದಾಖಲಾಗಿದ್ದು, 1603 ಸಿಲಿಂಡರ್ಗಳನ್ನು ವಶಪಡಿಸಿಕೊಳ್ಳಲಾಗಿದೆ. ಗ್ಯಾಸ್ ಅಭಾವದ ನಡುವೆ ಜನರು ಪರ್ಯಾಯ ಮಾರ್ಗಗಳನ್ನು ಹುಡುಕುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಸರ್ಕಾರ ಪೂರೈಕೆ ಸುಧಾರಿಸಲು ಕ್ರಮ ಕೈಗೊಳ್ಳುತ್ತಿದೆ.