ಬೆಂಗಳೂರು, ಜೂ. 23 (DaijiworldNews/AK): ಕರ್ನಾಟಕದ ಐವರು ಸಾಧಕರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪದ್ಮ ಪ್ರಶಸ್ತಿ ಪ್ರದಾನ ಮಾಡಿದ್ದಾರೆ.

ಕೆಎಲ್ಇ ಸಂಸ್ಥೆಯ ಮೂಲಕ ಲಕ್ಷಾಂತರ ಗ್ರಾಮೀಣ ವಿದ್ಯಾರ್ಥಿಗಳಿಗೆ ಜಾಗತಿಕ ಮಟ್ಟದ ಶಿಕ್ಷಣ ಮತ್ತು ಆಸ್ಪತ್ರೆಗಳ ಮೂಲಕ ಬಡವರಿಗೆ ಅತ್ಯಾಧುನಿಕ ಉಚಿತ/ಕಡಿಮೆ ವೆಚ್ಚದ ವೈದ್ಯಕೀಯ ಸೇವೆ ನೀಡುತ್ತಿರುವ ಮಹಾದಾನಿ ಡಾ. ಪ್ರಭಾಕರ್ ಕೋರೆ.
ದೂರದರ್ಶನ ಮತ್ತು ಆಕಾಶವಾಣಿಯನ್ನು ಸಂಪೂರ್ಣವಾಗಿ ನವೀಕರಿಸಿ, ಕೋವಿಡ್ ಸಮಯದಲ್ಲಿ ‘ರಾಮಾಯಣ’ ಪ್ರಸಾರದ ಮೂಲಕ ಜಾಗತಿಕ ದಾಖಲೆ ಬರೆದ ಹಾಗೂ ಕೋಟ್ಯಂತರ ವಿದ್ಯಾರ್ಥಿಗಳಿಗೆ ಉಚಿತ ಟಿವಿ ಶಿಕ್ಷಣ ತಲುಪಿಸಿದ ತಂತ್ರಜ್ಞ ಶಶಿ ಶೇಖರ್ ವೇಂಪತಿ.
ಸ್ವತಃ ತೀವ್ರ ಕಾಯಿಲೆಯಿಂದ ಬಳಲುತ್ತಿದ್ದರೂ ಅದನ್ನು ಮೆಟ್ಟಿ ನಿಂತು, ದೇಶದಲ್ಲೇ ಮೊದಲ ಬಾರಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಹಿಮೋಫಿಲಿಯಾ ರೋಗಿಗಳಿಗೆ ಉಚಿತ ಚಿಕಿತ್ಸೆ ಸಿಗುವಂತೆ ಮಾಡಿದ ಕ್ರಾಂತಿಕಾರಿ ವೈದ್ಯ ಡಾ. ಸುರೇಶ್ ಹನಗವಾಡಿ.
ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಕಡ್ಡಾಯವಾಗಿರುವ ‘ದೃಷ್ಟಿ’ ವ್ಯವಸ್ಥೆಯನ್ನು ಆವಿಷ್ಕರಿಸಿ, ‘ಅಗ್ನಿ’ ಕ್ಷಿಪಣಿಯ ತಾಂತ್ರಿಕ ದೋಷ ನಿವಾರಿಸಿ ಭಾರತೀಯ ರಕ್ಷಣಾ ವಲಯವನ್ನು ಸ್ವಾವಲಂಬಿಯಾಗಿಸಿದ ವಿಜ್ಞಾನಿ ಡಾ. ಶುಭಾ ವೆಂಕಟೇಶ್ ಅಯ್ಯಂಗಾರ್.
ಪ್ರೆಸ್ಟೀಜ್ ಸಂಸ್ಥೆಯನ್ನು ಬಿಲಿಯನ್ ಡಾಲರ್ ಉದ್ಯಮವಾಗಿ ಬೆಳೆಸಿ, ಕುಕ್ಕರ್ ಅಪಘಾತ ತಡೆಯುವ ಆವಿಷ್ಕಾರದ ಪೇಟೆಂಟ್ ಹಕ್ಕನ್ನು ದೇಶದ ಜನರ ಜೀವ ರಕ್ಷಣೆಗಾಗಿ ಇಡೀ ಉದ್ಯಮಕ್ಕೆ ಉಚಿತವಾಗಿ ಬಿಟ್ಟುಕೊಟ್ಟ ಉದಾರ ಉದ್ಯಮಿ ಶ್ರೀ ಟಿ.ಟಿ. ಜಗನ್ನಾಥನ್. ಇವರಿಗೆ ಮರಣೋತ್ತರ ಪ್ರಶಸ್ತಿ ಪ್ರದಾನ ಮಾಡಲಾಯಿತು.