ಮುಂಬೈ, ,ಜೂ. 24 (DaijiworldNews/AA): ಪ್ರಿ-ವೆಡ್ಡಿಂಗ್ ಫೋಟೋಶೂಟ್ ನೆಪದಲ್ಲಿ ಮಹಿಳೆ ಪ್ರಿಯಕರನೊಂದಿಗೆ ಸೇರಿ ಭಾವಿ ಪತಿಯನ್ನು ಹತ್ಯೆ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿನಡೆದಿದ್ದು, ಮದುವೆಗಾಗಿ 17 ಕೋಟಿ ಮೌಲ್ಯದ ಅರಮನೆಯನ್ನು ಬುಕ್ ಮಾಡಲಾಗಿತ್ತು ಎಂಬುದು ತಿಳಿದುಬಂದಿದೆ.

ಮಹಾರಾಷ್ಟ್ರದ ಉದ್ಯಮಿ ವಿಶಾಲ್ ಅಗರ್ವಾಲ್ ಅವರ ಪುತ್ರ ಕೇತನ್ ಅಗರ್ವಾಲ್ ಮೃತ ವ್ಯಕ್ತಿ. ಜೂನ್ 18ರಂದು ಲೋನಾವಾಲಾ ಸಮೀಪದ ಲೋಹಗಢ ಕೋಟೆಗೆ ಭಾವಿ ಪತ್ನಿ ಸಿಯಾ ಗೋಯಲ್ ಜೊತೆ ಪ್ರಿ-ವೆಡ್ಡಿಂಗ್ ಶೂಟ್ಗೆ ತೆರಳಿದ್ದ. ಅಲ್ಲಿಯೇ ಸಿಯಾ ಗೋಯಲ್, ಕೇತನ್ನನ್ನು ಕಂದಕಕ್ಕೆ ತಳ್ಳಿ ಕೊಲೆ ಮಾಡಿದ್ದಾಳೆ.
ನವೆಂಬರ್ನಲ್ಲಿ ರಾಜಸ್ಥಾನದ ಉದಯಪುರದಲ್ಲಿ ಕೇತನ್ ಮತ್ತು ಸಿಯಾ ಗೋಯಲ್ ಅವರ ಅದ್ಧೂರಿ ಮದುವೆ ನಿಗದಿಯಾಗಿತ್ತು. ಮದುವೆಗಾಗಿ 17 ಕೋಟಿ ರೂ. ವೆಚ್ಚದ ಅರಮನೆಯನ್ನು ಬುಕ್ ಮಾಡಲಾಗಿತ್ತು. ಅತಿಥಿಗಳಿಗಾಗಿ ಎರಡು ಖಾಸಗಿ ವಿಮಾನಗಳ ವ್ಯವಸ್ಥೆಯನ್ನೂ ಮಾಡಲಾಗಿತ್ತು. ಆದರೆ, ಸಿಯಾಗೆ ಈ ಮದುವೆ ಇಷ್ಟವಿರಲಿಲ್ಲ. ಆದ್ದರಿಂದ ತನ್ನ ಪ್ರಿಯಕರ ಚೇತನ್ ಚೌಧರಿ ಜೊತೆ ಜೀವನ ಸಾಗಿಸಲು ಕೇತನ್ ಅಡ್ಡಿಯಾಗಿದ್ದಾನೆ ಎಂದು ಭಾವಿಸಿ ಹತ್ಯೆಗೆ ಸಂಚು ರೂಪಿಸಿದ್ದಳು.
ಗೋಯಲ್ ತನ್ನ ಹುಟ್ಟುಹಬ್ಬದ ನೆಪದಲ್ಲಿ ಕೇತನ್ನನ್ನು ಲೋಹಗಢ ಕೋಟೆಗೆ ಕರೆದೊಯ್ದು, ಪ್ರಿಯಕರನ ಸಹಾಯದಿಂದ ಆಳವಾದ ಕಂದಕಕ್ಕೆ ತಳ್ಳಿದ್ದಾಳೆ. ತನಿಖೆಯಲ್ಲಿ ಚೇತನ್ ಕೂಡ ಘಟನೆ ನಡೆದ ಸ್ಥಳದಲ್ಲಿದ್ದ ಎಂಬುದು ದೃಢಪಟ್ಟಿದ್ದು, ಕೇತನ್ ಹತ್ಯೆಗೆ ಸಂಚು ರೂಪಿಸಿದ್ದನ್ನು ಇಬ್ಬರೂ ಒಪ್ಪಿಕೊಂಡಿದ್ದಾರೆ. ಸದ್ಯ ಇಬ್ಬರೂ ಆರೋಪಿಗಳು ಪೊಲೀಸ್ ವಶದಲ್ಲಿದ್ದು, ತನಿಖೆ ಮುಂದುವರಿದಿದೆ.