ಮೊಳಕಾಲ್ಮುರು, ಫೆ.21 (DaijiworldNews/MB) : ''ಬಾದಾಮಿಯಲ್ಲಿ ಸಿದ್ದರಾಮಯ್ಯ ವಿರುದ್ಧ ನಾನು ಸೋಲನುಭವಿಸಲು ಮತದಾರರು ಕಾರಣರಲ್ಲ. ಬಿಜೆಪಿಯ ಕೆಲ ಮುಖಂಡರುಗಳ ಷಡ್ಯಂತ್ರವೇ ಕಾರಣ'' ಎಂದು ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಆರೋಪಿಸಿದರು.

ತಾಲ್ಲೂಕಿನ ಕೊಂಡ್ಲಹಳ್ಳಿಯಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ನರೇಂದ್ರ ಮೋದಿ, ಅಮಿತ್ ಶಾರಂತೆ ಸಣ್ಣ ಬೇಡ ಕುಲದಲ್ಲಿ ಜನಿಸಿರುವ ನಾನು ಎರಡು ಕಡೆ ಸ್ಪರ್ಧೆ ಮಾಡಿ ಗೆದ್ದರೆ ಮುಂದೆ ನಾನು ಅವರಿಗೆ ಮುಳ್ಳಾಗಬಹುದು ಎಂದು ಕೆಲವು ಬಿಜೆಪಿ ಮುಖಂಡರು ನನ್ನ ವಿರುದ್ದ ಪಿತೂರಿ ಮಾಡಿ ನನ್ನನ್ನು ಸೋಲಿಸಿದರು'' ಎಂದು ದೂರಿದ್ದು, ''ನಾನು ಕೇವಲ 1,400 ಮತಗಳ ಅಂತರದಲ್ಲಿ ಅಲ್ಲಿ ಸೋತೆ'' ಎಂದು ಹೇಳಿದರು.
''ನಾನು ರಾಜಕಾರಣದಲ್ಲಿ ಎಂದೂ ಭಯಪಟ್ಟವನಲ್ಲ. ಎಲ್ಲೋ ನನ್ನ ವಿರುದ್ಧ ಪಿತೂರಿಗಳು ನಡೆಯುತ್ತಲ್ಲಿದೆ. ಈ ಬಗ್ಗೆ ನಾನು ಪಕ್ಷದ ವೇದಿಕೆಯಲ್ಲಿ ಮಾತನಾಡುತ್ತೇನೆ'' ಎಂದು ತಿಳಿಸಿದರು.
ಇನ್ನು ಇದೇ ವೇಳೆ ಮೊಳಕಾಲ್ಮುರಿನ ಜನರಿಗೆ ಧನ್ಯವಾದ ತಿಳಿಸಿದ ಅವರು, ''ಮೊಳಕಾಲ್ಮುರಿನ ಜನ ನನ್ನ ಕೈ ಹಿಡಿಯದಿದ್ದಲ್ಲಿ ನನ್ನ 30 ವರ್ಷಗಳ ರಾಜಕೀಯ ಜೀವನ ನಾಶವಾಗುತ್ತಿತ್ತು. ನಾನು ಮೊಳಕಾಲ್ಮುರಿನ ಋಣವನ್ನು ಸಾಯುವವರೆಗೂ ಮರೆಯಲಾರೆ'' ಎಂದರು.