ಬೆಂಗಳೂರು, ಮಾ.19 (DaijiworldNews/HR): ಕೊರೊನಾ ಪ್ರಕರಣ ಮತ್ತೆ ಏರಿಕೆಯಾಗುತ್ತಿದ್ದು, ಸರ್ಕಾರ ಕೊರೊನಾ ನಿಯಂತ್ರಣಕ್ಕೆ ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ. ಆದರೆ ನಾಗರೀಕರ ಸಹಕಾರವಿಲ್ಲದೇ ಇದು ಯಶಸ್ವಿಯಾಗುವುದಕ್ಕೆ ಸಾಧ್ಯವಿಲ್ಲ. ಹೀಗಾಗಿ ಕರ್ನಾಟಕದ ಜನರು ಎಲ್ಲಾ ಸುರಕ್ಷತಾ ಮಾರ್ಗಸೂಚಿಗಳನ್ನು ತಪ್ಪದೇ ಪಾಲಿಸಿ, ಸರ್ಕಾರದೊಂದಿಗೆ ಸಹಕರಿಸಬೇಕು" ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಮನವಿ ಮಾಡಿದ್ದಾರೆ.

ಈ ಕುರಿತಂತೆ ರಾಜ್ಯದ ಜನರನ್ನು ಉದ್ದೇಶಿಸಿ ಪತ್ರ ಬರೆದು ಟ್ವೀಟ್ ಅವರು, "ಕೊರೊನಾ ಸಾಂಕ್ರಾಮಿಕ ಪ್ರಕರಣಗಳ ಸಂಖ್ಯೆ ಮತ್ತೆ ತೀವ್ರವಾಗುತ್ತಿದೆ. ಸರ್ಕಾರ ಕೋವಿಡ್ ನಿಯಂತ್ರಣಕ್ಕೆ ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ. ಆದ್ರೇ ನಾಗರೀಕರ ಸಹಕಾರವಿಲ್ಲದೆ ಇದು ಯಶಸ್ವಿಯಾಗದು. ಮಾಸ್ಕ್ ಧಾರಣೆ, ಸ್ವಚ್ಛತೆ, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ನಮ್ಮ ಜೀವನಕ್ರಮವಾಗಲಿ, ಈ ಮುನ್ನೆಚ್ಚರಿಕೆಯ ಕ್ರಮಗಳ ನಿರ್ಲಕ್ಷ್ಯ ಸರ್ವಥಾ ಸಲ್ಲದು" ಎಂದಿದ್ದಾರೆ.
"ಹಿರಿಯ ನಾಗರೀಕರು, ಇತರ ಆರೋಗ್ಯ ಸಮಸ್ಯೆಯುಳ್ಳ 45 ರಿಂದ 60 ವರ್ಷದೊಳಗಿನ ವ್ಯಕ್ತಿಗಳು ತಪ್ಪದೇ ಲಸಿಕೆ ಪಡೆದುಕೊಂಡು, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಿ. ಆದ್ರೇ ಮುನ್ನೆಚ್ಚರಿಕೆಯ ಕ್ರಮಗಳ ಪಾಲನೆಯ ನಿರಂತರವಾಗಿ ಮುಂದುವರೆಯಲಿ. ಸಾರ್ವಜನಿಕ ಸ್ಥಳಗಳಲ್ಲಿ ಈ ಕ್ರಮಗಳನ್ನು ತಪ್ಪದೇ ಪಾಲಿಸುವ ಮೂಲಕ, ನಮ್ಮ ಜವಾಬ್ದಾರಿಯನ್ನು ನಿರ್ವಹಿಸೋಣ. ಕೋವಿಡ್-19 ನಿಯಂತ್ರಿಸೋಣ" ಎಂದರು.
ಇನ್ನು "ಜೀವ-ಜೀವನೋಪಾಯಗಳ ಸಮತೋಲನ ಕಾಪಾಡುವ ಹೊಣೆಗಾರಿಕೆಯನ್ನು ಯಶಸ್ವಿಯಾಗಿ ನಿರ್ವಹಿಸೋಣ. ಮುನ್ನೆಚ್ಚರಿಕೆಯೊಂದಿಗೆ ಮುನ್ನೆಡೆಯೋಣ" ಎಂಬುದಾಗಿ ರಾಜ್ಯದ ಜನತೆಗೆ ಮನವಿ ಮಾಡಿದ್ದಾರೆ.