ಬೆಂಗಳೂರು, ಮಾ. 20(DaijiworldNews/HR): ಮಾಜಿ ಸಚಿವ ರಮೇಶ್ ಜಾರಕಿಹೊಳೆ ಅವರು ಎನ್ನಲಾಗಿದ್ದ ಸಿ.ಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದು ರಮೇಶ್ ಜಾರಕಿಹೊಳಿಯನ್ನು ವಿಚಾರಣೆಗೆ ಒಳಪಡಿಸಿ ಸತ್ಯಾಂಶ ಹೊರಗೆಡವಲು ಪ್ರಯತ್ನಿಸಿದ್ದಾರೆ ಎನ್ನಲಾಗಿದೆ.

ಸತತ ನಾಲ್ಕು ಗಂಟೆಗಳ ಕಾಲ ರಮೇಶ್ ಜಾರಕಿಹೊಳಿ ಅವರನ್ನು ವಿಚಾರಿಸಿದಾಗ ಬಹುತೇಕ ಪ್ರಶ್ನೆಗಳಿಗೆ 'ಗೊತ್ತಿಲ್ಲ' ಎಂಬ ಉತ್ತರವೇ ಲಭ್ಯವಾಗಿದ್ದು, ಈ ವೇಳೆ ಯುವತಿ ಜೊತೆ ನಡೆಸಿದ್ದಾರೆ ಎನ್ನಲಾದ ಸಂಭಾಷಣೆ ಬಗ್ಗೆ ಎಸ್ಐಟಿ ಅಧಿಕಾರಿಗಳು ಪ್ರಶ್ನೆ ಕೇಳಿದಾಗ ಅದಕ್ಕೂ ನನಗೆ ಗೊತ್ತಿಲ್ಲ ಎಂದಿದ್ದಾರೆ. ಆದರೆ, ಅದನ್ನು ಅಷ್ಟಕ್ಕೇ ಬಿಡದ ಅಧಿಕಾರಿಗಳು ಕರೆಗೆ ಸಂಬಂಧಿಸಿದ ಸಂಪೂರ್ಣ ದಾಖಲೆಗಳನ್ನು ರಮೆಶ್ ಜಾರಕಿಹೊಳಿ ಮುಂದಿಟ್ಟು ಶಾಕ್ ನೀಡಿದ್ದಾರೆ ಎನ್ನಲಾಗಿದೆ.
ಇನ್ನು ಎಸ್ಐಟಿ ಅಧಿಕಾರಿಗಳು ನೀಡಿದ ದಾಖಲೆಗಳನ್ನು ಕಂಡು ಬೆಚ್ಚಿಬಿದ್ದ ಜಾರಕಿಹೊಳಿ, ಆಕೆ ಯಾರು ಎಂಬುದೇ ಗೊತ್ತಿಲ್ಲ. ಮೊಬೈಲ್ ಬಗ್ಗೆ ನನಗೆ ಏನೂ ತಿಳಿದಿಲ್ಲ, ಅದರಲ್ಲಿ ನಾನು ಅನಕ್ಷರಸ್ಥ. ನಾನು ಆಕೆಯನ್ನು ಯಾವತ್ತೂ ಭೇಟಿಯಾಗಿಲ್ಲ ನನ್ನ ವಿರುದ್ಧ ಷಡ್ಯಂತ್ರ ಆಗಿದೆ ಮತ್ತು ಇದರ ಹಿಂದೆ ಮಹಾನಾಯಕ ಇದ್ದಾನೆ ಎಂದು ಉತ್ತರಿಸಿದ್ದಾರೆ.
ಹಾಗಾದರೆ ಆ ಮಹಾನಾಯಕ ಯಾರೆಂದು ಹೇಳಿ ಎಂದು ಎಸ್ಐಟಿ ಪ್ರಶ್ನಿಸಿದಾಗ ಆತ ಯಾರು ಎಂಬುದನ್ನು ನೀವೇ ತನಿಖೆ ಮಾಡಿ ಎಂದು ಅಧಿಕಾರಿಗಳಿಗೇ ತಿರುಗುಬಾಣ ಬಿಟ್ಟಿದ್ದಾರೆ. ಸಿಡಿ ನಕಲಿ ಎನ್ನುವುದಕ್ಕೆ ದಾಖಲೆ ಕೊಡಿ ಎಂದಾಗಲೂ ಆರೋಪದ ಬಗ್ಗೆ ನೀವೇ ತನಿಖೆ ಮಾಡಿ ಎಂದಿದ್ದಾರೆ.
ಇನ್ನು ಸತತ 4 ಗಂಟೆಯ ವಿಚಾರಣೆಯಲ್ಲಿ ಒಟ್ಟು 56 ಪ್ರಶ್ನೆಗಳನ್ನು ಜಾರಕಿಹೊಳೆಗೆ ಕೇಳಲಾಗಿದ್ದು, ಎಸ್ಐಟಿ ಹಿರಿಯ ಅಧಿಕಾರಿ ಸಂದೀಪ್ ಪಾಟೀಲ್, ಕೇಂದ್ರ ವಿಭಾಗದ ಡಿಸಿ ಅನುಚೇತ್, ದಕ್ಷಿಣ ವಿಭಾಗದ ಡಿಸಿಪಿ ಹರೀಶ್ ಪಾಂಡೆ, ಎಸಿಪಿ ಧರ್ಮೇಂದ್ರ ಅವರು ವಿಚಾರಣೆ ನಡೆಸಿದ್ದಾರೆ ಎನ್ನಲಾಗಿದೆ.