ಬೆಂಗಳೂರು, ಎ.15 (DaijiworldNews/PY): ದೇಶದಲ್ಲಿ, ರಾಜ್ಯದಲ್ಲಿ ಕೋವಿಡ್ ಲಸಿಕೆಗಳ ಕೊರತೆ ಎದುರಾಗಿದೆ. ಅಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕೊರತೆ ನೀಗಿಸುವ ಬದಲು "ಟೀಕಾ ಉತ್ಸವ" ಎನ್ನುವ ಬೂಟಾಟಿಕೆ ಆಡುತ್ತಿದ್ದಾರೆ ಎಂದು ಕಾಂಗ್ರೆಸ್ ಬಿಜೆಪಿ ವಿರುದ್ದ ಕಿಡಿಕಾರಿದೆ.

ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್, ದೇಶದಲ್ಲಿ, ರಾಜ್ಯದಲ್ಲಿ ಕೋವಿಡ್ ಲಸಿಕೆಗಳ ಕೊರತೆ ಎದುರಾಗಿದೆ. ಅಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕೊರತೆ ನೀಗಿಸುವ ಬದಲು "ಟೀಕಾ ಉತ್ಸವ" ಎನ್ನುವ ಬೂಟಾಟಿಕೆ ಆಡುತ್ತಿದ್ದಾರೆ. ಇಲ್ಲಿ
ಬಿಜೆಪಿ ನಾಯಕರು ಲಸಿಕೆ ಕೊರತೆ ಇಲ್ಲವೆಂದು ಸುಳ್ಳು ಹೇಳುತ್ತಿದ್ದಾರೆ. ಸಚಿವ ಸುಧಾಕರ್ ಅವರೇ ಲಸಿಕೆ ಕೊರತೆ ನೀಗಿಸಲು ಯಾವ ಕ್ರಮ ಕೈಗೊಂಡಿದ್ದೀರಿ? ಎಂದು ಪ್ರಶ್ನಿಸಿದೆ.
ಕೊರೊನಾ ಲಸಿಕೆ ಉತ್ಸವಕ್ಕೆ ಕರೆಕೊಟ್ಟ ವೇಳೆಯೇ ರಾಜ್ಯದಲ್ಲಿ ಕೊರೊನಾ ವ್ಯಾಕ್ಸಿನ್ ಕೊರತೆ ಉಂಟಾಗಿದೆ. ಬೆಂಗಳೂರಿನ ಹಲವು ಆಸ್ಪತ್ರೆಗಳಲ್ಲಿ ಕೊರೊನಾ ಲಸಿಕೆ ಕೊರತೆಯಾಗಿದ್ದು, ನಾಳೆ ಬನ್ನಿ ಎಂದು ಹೇಳೀ ಕಳುಹಿಸುತ್ತಿದ್ದಾರೆ. ಈ ನಡುವೆ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿಯೂ ಕೂಡಾ ಅಲ್ಪ ಪ್ರಮಾಣದ ಕೊರೊನಾ ಲಸಿಕೆ ಇದೆ ಎನ್ನಲಾಗಿದೆ. ಆದರೆ, ದೇಶದಲ್ಲಿ ಕೊರೊನಾ ಲಸಿಕೆಗಳ ಕೊರತೆ ಉಂಟಾಗಿಲ್ಲ ಎಂದು ಕೇಂದ್ರ ಹಾಗೂ ರಾಜ್ಯ ಸರ್ಕಾರ ಹೇಳುತ್ತಿವೆ.
"ಕೊರೊನಾ ವ್ಯಾಕ್ಸಿನ್ ಕೊರತೆಯ ಜೊತೆಗೆ ರೆಮಿಡಿಸ್ವಿರ್ ಔಷಧ ಕೊರತೆಯೂ ಉಂಟಾಗಿದೆ. ಕೊರೊನಾ ಚಿಕಿತ್ಸೆಯಲ್ಲಿ ರೆಮಿಡಿಸ್ವಿರ್ ಔಷಧ ಮುಖ್ಯವಾಗಿದೆ. ಮೊದಲ ಮೂರು ದಿನದಿಲ್ಲೇ ರೆಮಿಡಿಸ್ವಿರ್ ಔಷಧ ನೀಡಿದಲ್ಲಿ ಸೋಂಕಿನಿಂದ ಬಚಾವ್ ಆಗಬಹುದು. ಇಲ್ಲದಿದ್ದರೆ ಸಮಸ್ಯೆ ಎದುರಿಸಬೇಕಾಗುತ್ತದೆ" ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಆರೋಗ್ಯ ಸಚಿವ ಡಾ. ಕೆ.ಸುಧಾಕರ್ ಅವರು, "ರೆಮಿಡಿಸ್ವಿರ್ ಔಷಧದ ಸಮರ್ಪಕ ಪೂರೈಕೆಗೆ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಅನ್ನು ನೋಡಲ್ ಏಜೆನ್ಸಿಯಾಗಿ ನಿಯೋಜಿಸಲಾಗಿದ್ದು, ಸರ್ಕಾರಿ ಆಸ್ಪತ್ರೆಗಳಿಗೆ ಹಾಗೂ ಸರ್ಕಾರ ಶಿಫಾರಸ್ಸು ಮಾಡಿರುವ ಸೋಂಕಿತರ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗಳಿಗೆ ಅವಶ್ಯಕ ರೆಮಿಡಿಸ್ವಿರ್ ಔಷಧ ಸರಬರಾಜು ಮಾಡಲು ಎಸ್ಎಎಸ್ಟಿಗೆ ಹೊಣೆಗಾರಿಕೆ ನೀಡಲಾಗಿದೆ ಎಂದಿದ್ದಾರೆ.
"ಸ್ವಯಂ ಪ್ರೇರಿತರಾಗಿ ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಾಗಿರುವ ಸೋಂಕಿತರ ಚಿಕಿತ್ಸೆಗೆ ರೆಮಿಡಿಸ್ವಿರ್ ಔಷಧ ಪೂರೈಸಲು ಶ್ರೀ ಕೆಂಪಯ್ಯ ಸುರೇಶ್, ಉಪ ಔಷಧ ನಿಯಂತ್ರಕರರು, ಇವರನ್ನು ನೋಡಲ್ ಅಧಿಕಾರಿಯಾಗಿ ನೇಮಿಸಲಾಗಿದ್ದು, ಖಾಸಗಿ ಆಸ್ಪತ್ರೆಗಳು ಸೋಂಕಿತರ ಎಸ್ಆರ್ಎಫ್ ಐಡಿ ಮುಂತಾದ ವಿವರಗಳನ್ನು ಇಮೇಲ್ ಅಥವಾ ವಾಟ್ಸಾಪ್ ಮೂಲಕ ಒದಗಿಸಿ ಔಷಧ ಪಡೆಯಬಹುದು ಎಂದು ತಿಳಿಸಿದ್ದಾರೆ.