ಬೆಂಗಳೂರು, ಎ.15 (DaijiworldNews/PY): "ಕೊರೊನಾ ಸೋಂಕಿನಿಂದ ಮೃತಪಟ್ಟವರ ಅಂತ್ಯಸಂಸ್ಕಾರಕ್ಕೆ ಸಾಗಿಸುವ ಸಂದರ್ಭ ಖಾಸಗಿ ಆಂಬುಲೆನ್ಸ್ಗಳು ಹೆಚ್ಚು ಹಣ ವಸೂಲಿ ಮಾಡುತ್ತವೆ ಎನ್ನುವ ಆರೋಪ ಕೇಳಿ ಬರುತ್ತಿದ್ದು, ಅಂತವರ ವಿರುದ್ದ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು" ಎಂದು ಆರೋಗ್ಯ ಸಚಿವ ಕೆ.ಸುಧಾಕರ್ ಎಚ್ಚರಿಕೆ ನೀಡಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಖಾಸಗಿ ಆಂಬುಲೆನ್ಸ್ನವರು ಹಣ ವಸೂಲಿ ಮಾಡಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಹೆಣದ ಮೇಲೆ ಶೋಷಣೆ ಮಾಡುವುದು ಸೂಕ್ತವಲ್ಲ. ಅಂತವರ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಕ್ರಮ ತೆಗೆದುಕೊಳ್ಳುತ್ತೇವೆ. ಯಾರೇ ಆಗಲಿ ಈ ರೀತಿಯ ಕೆಲಸ ಮಾಡಬಾರದು. ಇಂತಹ ಸಂದರ್ಭದಲ್ಲಿ ಅಮಾನವೀಯ ನಡವಳಿಕೆ ಸರಿಯಲ್ಲ" ಎಂದಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ಬಿಬಿಎಂಪಿ ಆಯುಕ್ತ ಗೌರವ್ ಗುಪ್ತಾ, "ಹಿಂದಿನ ಆದೇಶವನ್ನು ಪಾಲನೆ ಮಾಡುವಂತೆ ತಿಳಿಸಿದ್ದೇವೆ. ಅದರ ಪ್ರಕಾರ, ಚಟ್ಟಕ್ಕೆ 300 ರೂ., ಅಸ್ಥಿ ಕೊಡುವ ಮಡಿಕೆಗೆ 50 ರೂ., ಈ 350 ರೂ. ಅನ್ನು ಬಿಬಿಎಂಪಿಯಿಂದ ನೀಡಲಾಗುವುದು. ಮೃತರ ಸಂಬಂಧಿಕರಿಂದ 250 ರೂ. ಪಡೆದುಕೊಳ್ಳಬೇಕು" ಎಂದು ತಿಳಿಸಿದ್ದಾರೆ.