ಬೆಂಗಳೂರು, ಎ.16 (DaijiworldNews/PY): "ಮಹಾರಾಷ್ಟ್ರದಲ್ಲಿ ಇದ್ದಷ್ಟು ಸೋಂಕಿನ ಪ್ರಮಾಣ ನಮ್ಮಲ್ಲಿಲ್ಲ. ಈ ಕಾರಣದಿಂದ ಮಹಾರಾಷ್ಟ್ರದಲ್ಲಿ ವಿಧಿಸಲಾಗಿರುವ ಜನತಾ ಕರ್ಫ್ಯೂವನ್ನು ರಾಜ್ಯದಲ್ಲಿ ಜಾರಿ ಮಾಡುವ ಅವಶ್ಯಕತೆ ಇಲ್ಲ" ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಕೊರೊನಾ ಸೋಂಕನ್ನು ತಡೆಗಟ್ಟುವ ನಿಟ್ಟಿನಲ್ಲಿ ಬೇರೆ ರಾಜ್ಯಗಳಲ್ಲು ಕೈಗೊಂಡಿರುವ ಕಠಿಣ ಕ್ರಮಗಳ ಬಗ್ಗೆ ನಾವು ಪರಿಶೀಲನೆ ನಡೆಸಿದ್ದೇವೆ. ರಾಜ್ಯದಲ್ಲಿ ಕೊರೊನಾ ಹೆಚ್ಚಳದ ಅಂದಾಜು, ತೆಗೆದುಕೊಳ್ಳಬೇಕಾದ ನಿಯಂತ್ರಣಗಳ ಬಗ್ಗೆ ತಾಂತ್ರಿಕಾ ಸಲಹಾ ಸಮಿತಿಯ ವರದಿಯ ಬಗ್ಗೆ ಸಿಎಂ ಅವರೊಂದಿಗೆ ಚರ್ಚೆ ನಡೆಸಿ ಕ್ರಮ ಕೈಗೊಳ್ಳುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು" ಎಂದಿದ್ದಾರೆ.
"ಕೊರೊನಾ ಸೋಂಕಿತರ ಪೈಕಿ ಎಷ್ಟು ಮಂದಿ ಸಾವನ್ನಪ್ಪಿದ್ಧಾರೆ ಎನ್ನುವ ಆಧಾರದ ಮೇಲೆ ಸಾವಿನ ಪ್ರಮಾಣವನ್ನು ಅಳೆಯಬೇಕು. ನಮ್ಮಲ್ಲಿ ಶೇ 0.5 ಅಥವಾ ಶೇ 0.6ರಷ್ಟು ಸಾವಿನ ಪ್ರಮಾಣ ಇದ್ದು, ಸಾವಿನ ಪ್ರಮಾಣವನ್ನು ಮತ್ತಷ್ಟು ಕಡಿಮೆ ಮಾಡುವ ಗುರಿ ಹೊಂದಿದ್ದೇವೆ" ಎಂದು ತಿಳಿಸಿದ್ದಾರೆ.
"ಕೊರೊನಾ ಹೆಚ್ಚಳದ ಬಗ್ಗೆ ಸಿಎಂ ಸೇರಿದಂತೆ ಗೃಹ ಸಚಿವರು ಹಾಗೂ ಎಲ್ಲರೂ ಗಮನಿಸುತ್ತಿದ್ದಾರೆ. ಕೆಲವು ಕಾರ್ಯಕ್ರಮಗಳನ್ನು ಮುಂದೂಡುವುದರಿಂದ ಜೀವ ಹೋಗುವುದಿಲ್ಲ. ಇದಕ್ಕೆ ಜನರು ಸಹಕರಿಸಬೇಕು" ಎಂದಿದ್ದಾರೆ.
"ಕೊರೊನಾ ವಿಚಾರದಲ್ಲಿ ಯಾರೂ ಕೂಡಾ ರಾಜಕಾರಣ ಮಾಡಬಾರದು. ಎಲ್ಲರೂ ಈ ಹೋರಾಟ ಮಾಡಿದರೆ ಕೊರೊನಾ ಸೋಂಕನ್ನು ಎದುರಿಸಬಹುದು" ಎಂದು ಹೇಳಿದ್ದಾರೆ.