ಬೆಂಗಳೂರು, ಮೇ.25 (DaijiworldNews/HR): "ದೇಶದಲ್ಲಿ ಕೊರೊನಾ ಪ್ರಕರಣಗಳು ತೀವ್ರಗತಿಯಲ್ಲಿ ಹರಡುತ್ತಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜನರಿಗೆ ಲಸಿಕೆ ನೀಡುವಲ್ಲಿ ವಿಫಲವಾಗಿದೆ. ಹಾಗಾಗಿ ನಮ್ಮ ಪಕ್ಷದ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಲ್ಲಿ 100 ಕೋಟಿ ವೆಚ್ಚದಲ್ಲಿ ಲಸಿಕೆ ಖರೀದಿಸಿ, ಜನರಿಗೆ ನೀಡಲು ನಿರ್ಧರಿಸಿದ್ದು, ಈ ಕಾರ್ಯಕ್ಕೆ ಸರ್ಕಾರ ಸಹಕರಿಸಬೇಕು" ಎಂದು ವಿಧಾನಸಭೆ ವಿರೋಪಕ್ಷದ ನಾಯಕ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.

ಈ ಕುರಿತು ವಿಡಿಯೊ ಬಿಡುಗಡೆ ಮಾಡಿರುವ ಸಿದ್ದರಾಮಯ್ಯ, "ಜಗತ್ತಿನಲ್ಲಿ ಮತ್ತು ದೇಶದಲ್ಲಿ ಯಾರು ಕೊರೊನಾ ಲಸಿಕೆ ಪಡೆದಿದ್ದಾರೊ ಅವರಲ್ಲಿ ರೋಗ ಹರಡುವಿಕೆ ಹಾಗೂ ಮರಣ ಪ್ರಮಾಣ ಕಡಿಮೆ ಆಗಿದೆ ಎನ್ನುವುದು ಸಾಬೀತಾಗಿದ್ದು, ಲಸಿಕೆ ಒದಗಿಸಬೇಕಾದ್ದು ಕೇಂದ್ರ ಸರ್ಕಾರದ ಕರ್ತವ್ಯ ಹಾಗೂ ಕೇಂದ್ರ ಮತ್ತು ರಾಜ್ಯ ಸರಕಾರಗಳು ಇದನ್ನು ಜನರಿಗೆ ನೀಡಲು ಜವಾಬ್ದಾರರು" ಎಂದರು.
"ಕರ್ನಾಟಕದಲ್ಲಿ ಕೂಡಾ ಲಸಿಕೆ ಅಭಾವದಿಂದ ವಿಷಮ ಪರಿಸ್ಥಿತಿ ನಿರ್ಮಾಣವಾಗಿದ್ದು, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮತ್ತು ವಿರೋಧ ಪಕ್ಷದ ನಾಯಕನಾಗಿರುವ ನಾನು ಮತ್ತು ಪಕ್ಷದ ಮುಖಂಡರು ಚರ್ಚಿಸಿ, ನಮ್ಮ ಶಾಸಕರಿಗೆ ಬರುವ ಪ್ರದೇಶಾಭಿವೃದ್ಧಿ ನಿಧಿಯಲ್ಲಿ ಒಟ್ಟು 100 ಕೋಟಿ ಲಸಿಕೆ ಖರೀದಿಗೆ ವಿನಿಯೋಗಿಸಲು ತೀರ್ಮಾನಿಸಿದ್ದೇವೆ" ಎಂದಿದ್ದಾರೆ.
ಇನ್ನು "ಪಕ್ಷದ ಎಲ್ಲ ಶಾಸಕರು ಲಸಿಕೆ ಖರೀದಿಗೆ ಒಪ್ಪಿಕೊಂಡಿದ್ದು, ಸಂಗ್ರಹವಾಗಿರುವ 100 ಕೋಟಿಯನ್ನು ವಿನಿಯೋಗಿಸಿ ಲಸಿಕೆ ತರಿಸಿ ಜನರಿಗೆ ನೀಡಲು ಕಾಂಗ್ರೆಸ್ ಪಕ್ಷ ತೀರ್ಮಾನಿಸಿದೆ. ಇದಕ್ಕೆ ಜನರ ಹಾಗೂ ಸರ್ಕಾರದ ಸಹಕಾರ ಬೇಕು" ಎಂದು ಅವರು ಮನವಿ ಮಾಡಿಕೊಂಡಿದ್ದಾರೆ.