ಮೈಸೂರು, ಜು 02 (DaijiworldNews/PY): "ನನಗೆ ಸಚಿವ ಸ್ಥಾನ ಸಿಗಲಿದೆ ಎನ್ನುವ ವದಂತಿಗೆ ಕಿವಿಗೊಡಬೇಡಿ" ಎಂದು ಮೈಸೂರು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.

ಕೇಂದ್ರ ಸಚಿವ ಸಂಪುಟ ವಿಸ್ತರಣೆ ಸಂದರ್ಭ ಕರ್ನಾಟಕದಿಂದ ಮೈಸೂರು ಸಂಸದ ಪ್ರತಾಪ್ ಸಿಂಹಗೆ ಸಚಿವ ಸ್ಥಾನ ಸಿಗುವ ಸಾಧ್ಯತೆ ಇದೆ ಎಂಬ ಸುದ್ದಿ ಹಬ್ಬುತ್ತಿದ್ದು, ಈ ಬೆನ್ನಲ್ಲೇ ಅವರು ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, "ರಾಜ್ಯದಲ್ಲಿ ನನಗಿಂತೂ ಹಿರಿಯರು, ಅನುಭವಿಗಳು ಸಂಸದರಾಗಿದ್ದಾರೆ. ನಾನು ಅವರಿಗೆಲ್ಲರಿಗೂ ಶುಭಾಶಯ ತಿಳಿಸುತ್ತೇನೆ. ನನಗೆ ಸಚಿವ ಸ್ಥಾನ ಸಿಗಲಿದೆ ಎನ್ನುವ ವದಂತಿಗೆ ಕಿವಿಗೊಡಬೇಡಿ. ನನ್ನ ಮೇಲೆ ಮೈಸೂರಿನ ಜನ ವಿಶ್ವಾಸ ಇಟ್ಟಿದ್ದು, ಅವರ ವಿಶ್ವಾಸಕ್ಕೆ ತಕ್ಕಂತೆ ಕೆಲಸ ಮಾಡಿದ್ದೇನೆ. ಸಂಸದನಾಗಿ ಇರುವುದಕ್ಕಿಂತ ದೊಡ್ಡ ಹುದ್ದೆ ಬೇರೆ ಯಾವುದೂ ಇಲ್ಲ. ನಾನು ಇದಕ್ಕಿಂತ ಬೇರೆ ಏನ್ನನ್ನೂ ನಿರೀಕ್ಷಿಸಿಲ್ಲ. ನನಗೆ ಕೆಲಸ ಮಾಡುವುದಕ್ಕೆ ಇನ್ನೂ ಸಮಯ ಬೇಕು. ಮೈಸೂ ಹಾಗೂ ಕೊಡಗು ಮಂದಿಯ ನಿರೀಕ್ಷೆಗಳನ್ನು ಈಡೇರಿಸುವ ಜವಾಬ್ದಾರಿ ಇದೆ" ಎಂದು ಹೇಳಿದ್ದಾರೆ.
ಮೈಸೂರಿನ ಮಾದರಿ ಸರ್ಕಾರಿ ಶಾಲೆ ಜಾಗದಲ್ಲಿ ವಿವೇಕ ಸ್ಮಾರಕ ನಿರ್ಮಾಣ ವಿಚಾರದಲ್ಲಿ ಸೃಷ್ಟಿಯಾಗಿರುವ ವಿವಾದದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, "ವಿವೇಕಾನಂದರು ಯಾವ ಪ್ರಬಲ ಜಾತಿಗೆ ಸೇರಿದವರಲ್ಲ. ಅವರು ಪ್ರಬಲ ಜಾತಿಗೆ ಸೇರಿದವರಾಗಿದ್ದರೆ ಇಂದು ಈ ವಿವಾದ ಸೃಷ್ಟಿಯಾಗುತ್ತಿರಲಿಲ್ಲ. ಈ ವೇಳೆಗಾಗಲೇ ಸ್ಮಾರಕ ನಿರ್ಮಾಣಗೊಂಡು ವರ್ಷಗಳೇ ಕಳೆಯುತ್ತಿದ್ದವು" ಎಂದಿದ್ದಾರೆ.
"ಈ ವಿಚಾರ ವಿವಾದವಾಗಿದ್ದು,ಮೈಸೂರಿಗೆ ಆಗುತ್ತಿರುವ ಅವಮಾನ. ವಿವೇಕಾನಂದರು ಜಾತಿ ಐಕಾನ್ ಅಲ್ಲ ಬದಲಾಗಿ ಅರು ರಾಷ್ಟ್ರದ ಐಕಾನ್. ಅವರನ್ನು ಮಹಾರಾಜರೇ ಪ್ರೀತಿ ಹಾಗೂ ಗೌರವದಿಂದ ಕಂಡಿದ್ದಾರೆ. ಈ ವಿಚಾರವನ್ನು ಮೊದಲು ನಾವು ಗಮನದಲ್ಲಿಟ್ಟುಕೊಳ್ಳಬೇಕು" ಎಂದು ಹೇಳಿದ್ದಾರೆ.
"ಕೆಲ ಸಂಕುಚಿತ ಜನರು ಮೈಸೂರಿನಲ್ಲಿ ಹೋರಾಟ ನಡೆಸುತ್ತಿದ್ದಾರೆ. ಮುಂಭಾಗದ ಕಟ್ಟಡಕ್ಕೆ ಶಾಲೆಯ ಕಟ್ಟಡವನ್ನು ಸ್ಥಳಾಂತರಿಸಬಹುದು ಅಥವಾ ಕೂಗಳತೆಯ ದೇವರಾಜ ಶಾಲೆಗೆ ವರ್ಗಾಯಿಸಬಹುದಾಗಿದೆ. ಈ ಸರ್ಕಾರಿ ಶಾಲೆಯ ಜಾಗ ಹಸ್ತಾಂತರಕ್ಕೆ ಸಿಎಂ ಅವರು ಆದೇಶ ಮಾಡಿಕೊಡಲಿ. ಕೇವಲ ಎರಡೇ ಗಂಟೆಯಲ್ಲಿ ನಾನು ಕನ್ನಡ ಮಕ್ಕಳಿಗೆ ಯಾವುದೇ ರೀತಿಯಲ್ಲಿ ಅನ್ಯಾಯವಾಗದಂತೆ ಶಾಲೆಯನ್ನು ಸ್ಥಳಾಂತರಿಸಿ ಸ್ಮಾರಕ ನಿರ್ಮಾಣಕ್ಕೆ ಮುಂದಾಗುತ್ತೇನೆ" ಎಂದು ತಿಳಿಸಿದ್ದಾರೆ.