ನವದೆಹಲಿ, ಜು 03 (DaijiworldNews/PY): ವಿದೇಶಗಳಿಂದ ಹಣದ ನೆರವು ಪಡೆದುಕೊಂಡು, ಮತಾಂತರಕ್ಕೆ ಬಳಸಲಾಗುತ್ತಿದೆ ಎನ್ನುವ ಆರೋಪಗಳ ಹಿನ್ನೆಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದೆಹಲಿ ಹಾಗೂ ಉತ್ತರಪ್ರದೇಶದ ವಿವಿಧ ಸ್ಥಳಗಳಲ್ಲಿ ಶನಿವಾರ ದಾಳಿ ನಡೆಸಿದೆ ಎಂದು ಮೂಲಗಳು ಹೇಳಿವೆ.

ಇತ್ತೀಚೆಗೆ ಕಿವುಡ ವಿದ್ಯಾರ್ಥಿಗಳ ಹಾಗೂ ಬಡವರನ್ನು ಇಸ್ಲಾಂ ಧರ್ಮಕ್ಕೆ ಮತಾಂತರಗೊಳಿಸಲು ವಿದೇಶದಿಂದ ಹಣಕಾಸಿನ ನೆರವು ನೀಡಲಾಗುತ್ತಿದೆ ಎಂದು ಆರೋಪಿಸಲಾಗಿತ್ತು. ಈ ಹಿನ್ನೆಲೆ, ಅಧಿಕಾರಿಗಳು ದೆಹಲಿ ಹಾಗೂ ಉತ್ತರಪ್ರದೇಶಕ್ಕೆ ಸೇರಿದ ಆರು ಪ್ರದೇಶಗಳಲ್ಲಿ ಶೋಧಕಾರ್ಯ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮತಾಂತರಗೊಳಿಸುವ ಕಾರ್ಯದಲ್ಲಿ ನಿರತವಾಗಿದೆ ಎನ್ನಲಾದ ಜಾಲವನ್ನು ಕಳೆದ ತಿಂಗಳು ಉತ್ತರಪ್ರದೇಶದ ಪೊಲೀಸ್ ಭಯೋತ್ಪಾದನಾ ನಿಗ್ರಹ ದಳ ಬೇಧಿಸಿತ್ತು. ಇದಕ್ಕೆ ಸಂಬಂಧಿಸಿದಂತೆ ದೆಹಲಿಯ ಜಾಮಿಯಾ ನಗರ ನಿವಾಸಿಗಳಾದ ಮುಫ್ತಿ ಖಾಜಿ ಜಹಾಂಗೀರ್ ಅಲಂ ಕಸ್ಮಿ ಹಾಗೂ ಮೊಹಮ್ಮದ್ ಉಮರ್ ಗೌತಮ್ ಎನ್ನುವವರನ್ನು ಬಂಧಿಸಿತ್ತು.
ಬಂಧಿತ ಆರೋಪಿಗಳು ಇಸ್ಲಾಮಿಕ್ ದಾವಾ ಸೆಂಟರ್ ಎನ್ನುವ ಸಂಸ್ಥೆಯನ್ನು ನಡೆಸುತ್ತಿದ್ದರು. ಅಲ್ಲದೇ, ಪಾಕಿಸ್ತಾನದ ಐಎಸ್ಐ ಹಾಗೂ ವಿದೇಶಗಳ ಕೆಲ ಸಂಸಥೆಗಳಿಂದ ಆರ್ಥಿಕ ನೆರವು ಪಡೆಯುತ್ತಿದ್ದರು. ಮತಾಂತರ ಹಾಗೂ ಇತರ ಅಕ್ರಮ ಚಟುವಟಿಕೆಗಳಿಗೆ ಈ ಹಣವನ್ನು ಉಪಯೋಗಿಸುತ್ತಿದ್ದರು ಎಂದು ಎಟಿಎಸ್ ಆರೋಪಿಸಿತ್ತು.
ಈ ಬಗ್ಗೆ ಇ.ಡಿ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಕ್ರಿಮಿನಲ್ ಪ್ರಕರಣ ದಾಖಲಿಸಿಕೊಂಡಿದೆ.