ಶಿವಮೊಗ್ಗ, ಜು 04 (DaijiworldNews/PY): "ಪಕ್ಷದ ಒಳಗೆ ಟೀಕೆ ಮಾಡುವ ಬೆಳವಣಿಗೆ ನಮ್ಮ ಪಕ್ಷಕ್ಕೂ ಬಂದಿದೆ. ನಾನು ಈ ವಿಚಾರವನ್ನು ನೊಂದು ಹೇಳುತ್ತಿದ್ದೇನೆ" ಎಂದು ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.

ಶಿವಮೊಗ್ಗ ಜಿಲ್ಲಾ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಅವರು, "ಪಕ್ಷದ ಒಳಗಿರುವವರು ಟೀಕೆ ಮಾಡುವ ವ್ಯವಸ್ಥೆ ನಮ್ಮಲ್ಲಿ ಇರಲಿಲ್ಲ. ಸಂಘಟನೆ ಶಕ್ತಿಯುತವಾಗಿ ಮುನ್ನಡೆಯುತ್ತಾ ಹೋದಲ್ಲಿ ಪಕ್ಷಕ್ಕೆ ಎಂದಿಗೂ ತೊಂದರೆಯಾಗುವುದಿಲ್ಲ" ಎಂದಿದ್ದಾರೆ.
"ಕೊರೊನಾ ಬರುತ್ತೋ, ಸರ್ಕಾರ ಬರುತ್ತೋ ಅಥವಾ ಸಿಎಂ ಬದಲಾಗುತ್ತಾರೋ, ಇರುತ್ತಾರೋ ನನಗೆ ತಿಳಿದಿಲ್ಲ. ಆದರೆ, ಸಿದ್ದಾಂತವನ್ನು ನಂಬಿ ಕಾರ್ಯಕರ್ತರು ಸಂಘಟನೆ ಬೆಳೆಸಬೇಕಿದೆ" ಎಂದು ಹೇಳಿದ್ದಾರೆ.
"ಯಾರು ಏನೇ ಮಾತನಾಡಿದರೂ ಪರವಾಗಿಲ್ಲ. ಸಂಘಟನೆಯನ್ನು ಶಕ್ತಿಯುತವಾಗಿ ಬೆಳೆಸುವ ಬಗ್ಗೆ ಕಾರ್ಯಕರ್ತರು ಯೋಚಿಸಬೇಕು. ಪಕ್ಷದ ಒಳಗೆ ಅಥವಾ ಹೊರಗೆ ಆರೋಪ ಮಾಡಲಿ. ವಿರೋಧಿಗಳು ಮಾಡುವ ಟೀಕೆಗೆ ಸಂಘಟನೆ ಮೂಲಕವೇ ಉತ್ತರಿಸಬೇಕು. ಸಂಘಟನೆಯನ್ನು ಬೆಳಸುವತ್ತ ಕಾರ್ಯಕರ್ತರು ಗಮನಹರಿಸಬೇಕು. ನಾವು ಸಂಘಟನೆಯ ಮೂಲಕ ಜಾಗೃತಿ ಮೂಡಿಸಿ ಕೊರೊನಾದಂತಹ ಸಂಕಷ್ಟವನ್ನು ಎದುರಿಸಿದ್ದೇವೆ" ಎಂದಿದ್ದಾರೆ.