ನವದೆಹಲಿ, ಜು. 07 (DaijiworldNews/SM): ಮೋದಿ ಸಂಪುಟಕ್ಕೆ ಮೇಜರ್ ಸರ್ಜರಿ ನಡೆಸಲಾಗಿದೆ. ರವಿಶಂಕರ್ ಪ್ರಸಾದ್, ಪ್ರಕಾಶ್ ಜಾವ್ಡೇಕರ್, ಹರ್ಷವರ್ಧನ್, ಡಿ.ವಿ.ಎಸ್ ಸೇರಿದಂತೆ ಪ್ರಮುಖ 12 ಮಂದಿ ಸಚಿವರ ರಾಜೀನಾಮೆ ಪಡೆಯಲಾಗಿದೆ.

ಕೇಂದ್ರ ಸಚಿವ ಸಂಪುಟ ವಿಸ್ತರಣೆಗೂ ಮುನ್ನ 12 ಸಚಿವರು ರಾಜೀನಾಮೆ ನೀಡಿದ್ದಾರೆ. ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಪ್ರಧಾನಿ ನರೇಂದ್ರ ಮೋದಿ ಸೂಚನೆಯ ಮೇರೆಗೆ ರಾಜೀನಾಮೆ ಅಂಗೀಕಾರಗೊಳಿಸಿದ್ದಾರೆ. 6 ಕ್ಯಾಬಿನೆಟ್ ಸಚಿವರು, ಓರ್ವ ರಾಜ್ಯ ಖಾತೆ ಸಚಿವ(ಸ್ವತಂತ್ರ ನಿರ್ವಹಣೆ) ಹಾಗೂ 5 ರಾಜ್ಯ ಖಾತೆ ಸಚಿವರು ರಾಜೀನಾಮೆ ನೀಡಿದ್ದಾರೆ.
ಕಾನೂನು, ನ್ಯಾಯ, ಸಂವಹನ, ಐಟಿ ಹಾಗೂ ಎಲೆಕ್ಟ್ರಾನಿಕ್ಸ್ ಖಾತೆ ಸಚಿವರಾಗಿದ್ದ ರವಿಶಂಕರ್ ಪ್ರಸಾದ್, ಪರಿಸರ, ಅರಣ್ಯ ಹಾಗೂ ಹವಾಮಾನ ಬದಲಾವಣೆ ಸಚಿವ ಪ್ರಕಾಶ್ ಜಾವ್ಡೇಕರ್, ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವ ಹರ್ಷವರ್ಧನ್, ರಸಗೊಬ್ಬರ, ರಾಸಯನಿಕ ಸಚಿವ ಡಿ.ವಿ ಸದಾನಂದ ಗೌಡ, ಸಾಮಾಜಿಕ ನ್ಯಾಯ, ಸಬಲೀಕರಣ ಸಚಿವ ಥಾವರ್ ಚಂದ್ ಗೆಹ್ಲೋಟ್, ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್, ಕಾರ್ಮಿಕ ಹಾಗೂ ಉದ್ಯೋಗ ಖಾತೆ ರಾಜ್ಯ ಸಚಿವ, ಸ್ವತಂತ್ರ ನಿರ್ವಹಣೆ ಸಚಿವ ಸಂತೋಷ್ ಕುಮಾರ್ ಗಂಗ್ವಾರ್ ರಾಜೀನಾಮೆ ನೀಡಿದ ಪ್ರಮುಖರಾಗಿದ್ದಾರೆ.
ರಾಜೀನಾಮೆ ನೀಡಿದ ರಾಜ್ಯಖಾತೆ ಸಚಿವರು:
ಬಾಬುಲ್ ಸುಪ್ರಿಯೋ (ಪರಿಸರ, ಅರಣ್ಯ ಹಾಗೂ ಹವಾಮಾನ ಬದಲಾವಣೆ), ಧೋತ್ರೆ ಸಂಜಯ್ ಶಮರಾವ್ (ಶಿಕ್ಷಣ), ರಿಟಾನ್ ಲಾಲ್ ಕಟಾರಿಯಾ (ಜಲ ಶಕ್ತಿ), ಪ್ರತಾಪ್ ಚಂದ್ರ ಸಾರಂಗಿ (ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳು) ಮತ್ತು ದೇಬಶ್ರೀ ಚೌಧುರಿ (ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ)