ಬೆಂಗಳೂರು, ಆ 13 (DaijiworldNews/PY): ಸಿ ಟಿ ರವಿ ಅವರು ನೆಹರು ಹಾಗೂ ಇಂದಿರಾ ಗಾಂಧಿಯವರ ಕಾಲಿನ ಧೂಳಿಗೂ ಸಮವಿಲ್ಲ ಎಂದು ಹೇಳಿದ್ದ ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್ ಅವರಿಗೆ ತಿರುಗೇಟು ನೀಡಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ, "ನೀವು ಹೇಳಿದ್ದು ನೂರಕ್ಕೆ ನೂರು ಸತ್ಯ. ನಾನು ನೆಹರು ಹಾಗೂ ಇಂದಿರಾ ಗಾಂಧಿಯವರ ಪಾದದ ಧೂಳಿಗೆ ಖಂಡಿತ ಸಮಾನ ಅಲ್ಲ. ಈ ಮಹಾ ಭಾಗ್ಯ ಗುಲಾಮರಿಗೆ ಮಾತ್ರ ಮೀಸಲು" ಎಂದಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಮಾನ್ಯ ದಿನೇಶ್ ಗುಂಡೂರಾವ್ ಅವರೇ, "ನೀವು ಹೇಳಿದ್ದು ನೂರಕ್ಕೆ ನೂರು ಸತ್ಯ. ನಾನು ನೆಹರು ಹಾಗೂ ಇಂದಿರಾ ಗಾಂಧಿಯವರ ಪಾದದ ಧೂಳಿಗೆ ಖಂಡಿತ ಸಮಾನ ಅಲ್ಲ. ಈ ಮಹಾ ಭಾಗ್ಯ ಗುಲಾಮರಿಗೆ ಮಾತ್ರ ಮೀಸಲು. ರಾಷ್ಟ್ರಭಕ್ತರ ಹಾಗೂ ಮಹಾನ್ ಸಾಧಕರ ಪಾದದ ಧೂಳಿಗೆ ಸಮಾನವಾಗ ಬಯಸುತ್ತೇನೆಯೇ ಹೊರತು ದೇಶವನ್ನು ಕುಟುಂಬದ ಆಸ್ತಿಯನ್ನಾಗಿ ಮಾಡಿಕೊಂಡವರ ಪಾದದ ಧೂಳಿಗಲ್ಲ" ಎಂದು ಹೇಳಿದ್ದಾರೆ.
ಇಂದಿರಾ ಕ್ಯಾಂಟೀನ್ನ ಹೆಸರು ಬದಲಾಯಿಸಬೇಕು ಎಂದು ಕೆಲ ದಿನಗಳ ಹಿಂದೆ ಸಿ ಟಿ ರವಿ ಅವರು ಆಗ್ರಹಿಸಿದ್ದರು. ಆದರೆ, ಈ ನಡುವೆ ಹೇಳಿಕೆ ನೀಡಿದ್ದ ರವಿ ಅವರು, "ಕಾಂಗ್ರೆಸ್ಸಿಗರು ಬೇಕಾದಲ್ಲಿ ನೆಹರು, ಇಂದಿರಾ ಗಾಂಧಿ ಹೆಸರಲ್ಲಿ ಹುಕ್ಕಾಬಾರ್ಗಳನ್ನು ತೆರೆಯಲಿ" ಎಂದಿದ್ದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ದಿನೇಶ್ ಗುಂಡೂರಾವ್, "ಹುಚ್ಚುನಾಯಿ ಕಡಿತಕ್ಕೊಳಗಾದಂತೆ ಬಾಯಿಗೆ ಬಂದಂತೆ ಮಾತನಾಡುತ್ತಿರುವ ಸಿ. ಟಿ ರವಿಯವರ ಹುಚ್ಚು ಅಂತಿಮ ಹಂತ ತಲುಪಿದೆ. ನಾಡಿನ ಹಿತದೃಷ್ಟಿಯಿಂದ ಬಿಜೆಪಿ ವರಿಷ್ಠರು ರವಿಗೆ ಯಾವುದಾದರೂ ಪಶುವೈದ್ಯ ಶಾಲೆಯಲ್ಲಿ ಚಿಕಿತ್ಸೆ ಕೊಡಿಸಲಿ. ಇಲ್ಲವೇ, ಮಲ್ಲೇಶ್ವರದ ಬಿಜೆಪಿ ಕಚೇರಿಯನ್ನೇ ಹುಚ್ಚಾಸ್ಪತ್ರೆ ಮಾಡಲಿ. ಹೇಗಿದ್ದರೂ ಬಿಜೆಪಿ ಹುಚ್ಚರ ಸಂತೆಯಲ್ಲವೇ?" ಎಂದು ಪ್ರಶ್ನಿಸಿದ್ದರು.
ನೆಹರು ಹಾಗೂ ಇಂದಿರಾ ಗಾಂಧಿಯವರ ಕಾಲಿನ ಧೂಳಿಗೂ ಸಮವಿಲ್ಲದ ಸಿ ಟಿ ರವಿ, ಅವರ ಬಗ್ಗೆ ಕೀಳಾಗಿ ಮಾತನಾಡುವುದು ಅವರ ಹೀನ ಸಂಸ್ಕೃತಿಯನ್ನು ತೋರಿಸುತ್ತದೆ. ಕಾಂಗ್ರೆಸ್ ಕಚೇರಿಯನ್ನು ಹುಕ್ಕಾ ಬಾರ್ ಮಾಡಲು ಸಲಹೆ ಕೊಟ್ಟಿರುವ ರವಿ, ಕೇಶವ ಕೃಪಾ ಕಚೇರಿಯನ್ನು 'ಡ್ಯಾನ್ಸ್ ಬಾರ್' ಮಾಡಿ ಆಧುನಿಕ 'ಬೃಹನ್ನಳೆ'ಯಂತೆ ನಾಟ್ಯ ಮಾಡುತ್ತಾರೆಯೇ? ಎಂದು ಕೇಳಿದ್ದರು.
ಇಂದಿರಾ ಕ್ಯಾಂಟೀನ್ ಹೆಸರು ಬದಲಾಯಿಸಲು ಸಿ ಟಿ ರವಿ ಒಣ ಪೌರುಷ ತೋರಿಸುತ್ತಿದ್ದಾರೆ. ಇವರಿಗೆ ಜನರಿಗೆ ಅನುಕೂಲವಾಗುವ ಒಂದೇ ಒಂದು ಯೋಜನೆ ತರುವ ಯೋಗ್ಯತೆಯಿಲ್ಲ. ರವಿಯವರಿಗೆ ತಾಕತ್ತಿದ್ದರೆ ಇಂದಿರಾ ಕ್ಯಾಂಟೀನ್ ಮಾದರಿಯಲ್ಲೇ ಇನ್ನೊಂದು ಯೋಜನೆ ಜಾರಿ ಮಾಡಲಿ. ಆ ಯೋಜನೆಗೆ 'ಗೂಡ್ಸೆ' ಹೆಸರನ್ನು ಇಟ್ಟುಕೊಳ್ಳಲಿ ಎಂದಿದ್ದರು.