ಬೆಂಗಳೂರು, ಸೆ. 08 (DaijiworldNews/PY): "ಭ್ರಷ್ಟಾಚಾರದ ಸೋಂಕು ತಗುಲಿದ ಬಿಜೆಪಿ ಸರ್ಕಾರದ ಪ್ರತಿ ಇಲಾಖೆಯಲ್ಲಿಯೂ ಲೂಟಿ ಎಗ್ಗಿಲ್ಲದೆ ಸಾಗಿದೆ. ಭ್ರಷ್ಟಾಚಾರವೇ ಬಿಜೆಪಿ ಮನೆದೇವ್ರು!" ಎಂದು ಕಾಂಗ್ರೆಸ್ ಟೀಕಿಸಿದೆ.

ಈ ಬಗ್ಗೆ ಟ್ವೀಟ್ ಮಾಡಿರುವ ರಾಜ್ಯ ಕಾಂಗ್ರೆಸ್, "ಭ್ರಷ್ಟ ಬಿಜೆಪಿ ಲೂಟಿಯಿಂದ ಜನತೆಗೆ ಮೋಸ ಮಾಡುತ್ತಿದೆ. ಮೊಟ್ಟೆ ಖರೀದಿ ಲೂಟಿಯ ಮೂಲಕ ಮಕ್ಕಳಿಗೆ ಮೋಸ. ಸ್ವೆಟರ್ ಹಂಚಿಕೆ ಹಗರಣದ ಮೂಲಕ ಬಡವರಿಗೆ ಮೋಸ. ಕೃಷಿ ಯಂತ್ರೋಪಕರಣ ಖರೀದಿ ಹಗರಣದ ಮೂಲಕ ರೈತರಿಗೆ ಮೋಸ. ನೆರೆ ಪರಿಹಾರದ ಲೂಟಿಯ ಮೂಲಕ ಸಂತ್ರಸ್ತರಿಗೆ ಮೋಸ. ಕೋವಿಡ್ ಪರಿಕರ ಖರೀದಿ ಹಗರಣದ ಮೂಲಕ ಸೋಂಕಿತರಿಗೆ ಮೋಸ" ಎಂದು ಕಿಡಿಕಾರಿದೆ.
ರೈತರನ್ನು 'ಹೇಡಿಗಳು' ಎಂದು ಕರೆದು ಅವಮಾನಿಸಿದ್ದ ಬಿ.ಸಿ ಪಾಟೀಲ್ ಅವರೇ, ಈಗ ನಿಮ್ಮನ್ನ ನೀವು 'ಭ್ರಷ್ಟ' ಎಂದು ಕರೆದುಕೊಳ್ಳುವ ನೈತಿಕತೆ ತೋರುವಿರಾ? ರೈತರ ನೋವು ಆಲಿಸದ ಸಚಿವರು 210 ಕೋಟಿ ಕಿಕ್ ಬ್ಯಾಕ್ ಪಡೆಯುವುದರಲ್ಲಿ ಮಗ್ನರಾಗಿದ್ದರು. ಭ್ರಷ್ಟಾಚಾರದ ಸೋಂಕು ತಟ್ಟಿದ ಈ ಸೋಂಕಿತ ಸರ್ಕಾರದ ಸಂಪುಟದ ತುಂಬಾ ಭ್ರಷ್ಟರೇ ತುಂಬಿದ್ದಾರೆ ಎಂದು ಆರೋಪಿಸಿದೆ.
"ಭ್ರಷ್ಟಾಚಾರದ ಸೋಂಕು ತಗುಲಿದ ಬಿಜೆಪಿ ಸರ್ಕಾರದ ಪ್ರತಿ ಇಲಾಖೆಯಲ್ಲಿಯೂ ಲೂಟಿ ಎಗ್ಗಿಲ್ಲದೆ ಸಾಗಿದೆ. ಸ್ವೆಟರ್ ಹಗರಣದಲ್ಲಿ ಆರ್ ಅಶೋಕ್ ಅವರ ಕೈವಾಡ, ಮೊಟ್ಟೆ ಹಗರಣದ ಶಶಿಕಲಾ ಜೊಲ್ಲೆ ಅವರ ಕಿಕ್ ಬ್ಯಾಕ್, ಯಂತ್ರ ಖರೀದಿಯಲ್ಲಿ ಕಿಕ್ ಬ್ಯಾಕ್ ಪಡೆದ ಬಿ. ಸಿ ಪಾಟೀಲ್. ಇವರ ತನಿಖೆ ನಡೆಸದೆ ಹಗರಣ ಮುಚ್ಚಿ ಹಾಕಲಾಗುತ್ತಿದೆ" ಎಂದಿದೆ.
"ಸಿಎಂ ಬಸವರಾಜ ಬೊಮ್ಮಾಯಿ ಅವರೇ ನಿಮ್ಮದು ಭ್ರಷ್ಟರೇ ತುಂಬಿದ ಕಳಂಕಿತ ಸಂಪುಟವಾಗಿದೆ, ಸ್ವೆಟರ್ ಹಗರಣದಲ್ಲಿ ಆರ್ ಅಶೋಕ್ ಅವರ ಕೈವಾಡವಿದೆ, ಶಶಿಕಲಾ ಜೊಲ್ಲೆ ಅವರ ಮೊಟ್ಟೆ ಹಗರಣವಿದೆ, ಬಿ. ಸಿ ಪಾಟೀಲ್ ಅವರದ್ದು ಕಿಕ್ ಬ್ಯಾಕ್ ಹಗರಣ. ಕಿಕ್ ಬ್ಯಾಕ್ ಪಡೆದವರನ್ನ ಕಿಕ್ ಔಟ್ ಮಾಡುವುದು ಬಿಟ್ಟು ಭ್ರಷ್ಟಾಚಾರಕ್ಕೆ ಮೌನ ಸಮ್ಮತಿ ನೀಡುತ್ತಿದ್ದೀರಾ?" ಎಂದು ಪ್ರಶ್ನಿಸಿದೆ.
"ಬಿಜೆಪಿ ಸರ್ಕಾರ ವಿದ್ಯಾರ್ಥಿಗಳ ಪಾಲಿನ ಸ್ವೆಟರ್ಗಳನ್ನೂ ಬಿಡಲಿಲ್ಲ. ಬಡಮಕ್ಕಳ ಮೊಟ್ಟೆಯನ್ನೂ ಬಿಡಲಿಲ್ಲ. ಈಗ ರೈತರನ್ನೂ ಬಿಡದೆ ಲೂಟಿಗಿಳಿದಿದೆ, ಕೃಷಿ ಯಂತ್ರೋಪಕರಣ ಖರೀದಿ ಹಗರಣ ನಡೆದಿದ್ದರೂ ಸಿಎಂ ಬಸವರಾಜ ಬೊಮ್ಮಾಯಿ ಅವರು ಏನೂ ನಡೆದೇ ಇಲ್ಲವೆಂಬಂತೆ ವರ್ತಿಸಿ ಭ್ರಷ್ಟರಿಗೆ ಬೆಂಬಲ ಸೂಚಿಸಿದ್ದಾರೆ. ಭ್ರಷ್ಟಾಚಾರವೇ ಬಿಜೆಪಿ ಮನೆದೇವ್ರು!" ಎಂದು ಟೀಕಿಸಿದೆ.