ಹಾಸನ, ಸ.09 (DaijiworldNews/HR): ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರು ಜೆಡಿಎಸ್ ಮುಳುಗುವ ಹಡಗು ಎಂದು ಹೇಳಿದ್ದಾರೆ ಹಾಗಾಗಿ ಮುಳುಗುವ ಹಡಗಿನ ಜೊತೆ ಸೇರಿ ನಿಮ್ಮ ಸ್ಥಾನಕ್ಕೆ ಕುತ್ತು ತಂದುಕೊಳ್ಳಬೇಡಿ ಎಂದು ಬಿಜೆಪಿಗೆ ಎಚ್.ಡಿ.ರೇವಣ್ಣ ಟಾಂಗ್ ನೀಡಿದ್ದಾರೆ.

ಕಲಬುರಗಿ ಮಹಾನಗರ ಪಾಲಿಕೆಯ ಅಧಿಕಾರ ಹಿಡಿಯಲು ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಳ್ಳಲಿವೆ ಎಂಬ ವರದಿಗೆ ಪ್ರತಿಕ್ರಿಯೆ ನೀಡಿದ ಅವರು, "ನೀವು ಮುಳುಗುವ ಹಡಗಿನ ಜೊತೆ ಯಾಕೆ ಬರುತ್ತೀರಾ? ಮುಳುಗುವ ಹಡಗಿನ ಜೊತೆ ಸೇರಿ ನಿಮ್ಮ ಸ್ಥಾನಕ್ಕೆ ಕುತ್ತು ತಂದುಕೊಳ್ಳಬೇಡಿ. ನಮ್ಮೊಂದಿಗೆ ನೀವು ಹೊಂದಾಣಿಕೆ ಮಾಡಿಕೊಂಡರೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕುರ್ಚಿಗೆ ಧಕ್ಕೆ ಬರಲಿದೆ" ಎಂದಿದ್ದಾರೆ.
ಇನ್ನು ಜೆಡಿಎಸ್ ಯಾವ ಪಕ್ಷಕ್ಕೆ ಬೆಂಬಲ ನೀಡಬೇಕು ಎಂಬುದನ್ನು ಪಕ್ಷದ ವರಿಷ್ಠ ಎಚ್.ಡಿ.ದೇವೇಗೌಡ ಮತ್ತು ಎಚ್.ಡಿ.ಕುಮಾರಸ್ವಾಮಿ ಅವರು ಕಾರ್ಯಕರ್ತರ ಜತೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುತ್ತಾರೆ. ಅರುಣ್ ಸಿಂಗ್ ಹೇಳಿದ್ದನ್ನು ಮೊದಲಿಗೆ ಮುಖ್ಯಮಂತ್ರಿ ಪಾಲಿಸಲಿ. ಹಡಗು ಮುಳುಗಿದರೆ ನಮ್ಮ ಬಳಿ ಸಬ್ ಮೆರಿನ್ ಇದೆ. ಪಕ್ಷ ಉಳಿಸಿಕೊಳ್ಳುವುದು ಗೊತ್ತು" ಎಂದು ಹೇಳಿದ್ದಾರೆ.